ಅಭಿಮಾನಿಗಳ ಆಕ್ರೋಶಕ್ಕೆ ನಟ ಯಶ್ ದುಬಾರಿ ಕಾರಿನ ಗ್ಲಾಸ್ ಪುಡಿಪುಡಿ
ಯಾದಗಿರಿ, ಫೆ.28- ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಚಿತ್ರನಟ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಸುರಪುರದಲ್ಲಿ ರೈತರ ಜೊತೆ ಸಂವಾದಕ್ಕೆ ನಟ ಯಶ್ ಮಧ್ಯಾಹ್ನ 2 ಗಂಟೆಗೆ ಬರಬೇಕಿತ್ತು. ಯಶ್ ನೋಡಲು ಸಹಸ್ರಾರು ಅಭಿಮಾನಿಗಳು ನೆರೆದಿದ್ದರು. ಸಂವಾದಕ್ಕಿಂತ ಹೆಚ್ಚಾಗಿ ನಟನನ್ನು ಕಣ್ತುಂಬಿಕೊಳ್ಳಲೆಂದು ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಆದರೆ ಯಶ್ ಬಂದಿದ್ದು ರಾತ್ರಿ 9 ಗಂಟೆಗೆ. ಅಷ್ಟರಲ್ಲಾಗಲೇ ಅಭಿಮಾನಿಗಳ ಆಕ್ರೋಶ ಕಟ್ಟೆ ಒಡೆದಿತ್ತು. ಯಶ್ ಬರುತ್ತಿದ್ದಂತೆ ಕಾರಿನ ಮೇಲೆ ಮುಗಿಬಿದ್ದರು. ಇದರಿಂದ ಅವರ ದುಬಾರಿ ಕಾರಿನ ಗ್ಲಾಸ್ ಪುಡಿಪುಡಿಯಾಯಿತು. ಕೆಲವು ಅಭಿಮಾನಿಗಳು ಆಕ್ರೋಶದಿಂದ ಛೇರ್ಗಳನ್ನು ಎತ್ತಿ ಬಿಸಾಡಿ ದಾಂಧಲೆ ನಡೆಸಿದ ಘಟನೆಯೂ ನಡೆಯಿತು.
ತಮ್ಮ ಯಶೋ ಮಾರ್ಗದ ಮೂಲಕ ಚಿತ್ರ ನಟ ಯಶ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಬರ ಪ್ರವಾಸ ಹಮ್ಮಿಕೊಂಡಿದ್ದು, ಬರ ಅಧ್ಯಯನದಲ್ಲಿ ತೊಡಗಿದ್ದಾರೆ. ಈ ಸಂಬಂಧ ಯಾದಗಿರಿಯಲ್ಲಿ ರೈತರ ಜೊತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಏಳು ಗಂಟೆ ತಡವಾಗಿ ಬಂದಿದ್ದಕ್ಕೆ ಅಭಿಮಾನಿಗಳು ಆಕ್ರೋಶದಿಂದ ಕಾರನ್ನು ಜಖಂಗೊಳಿಸಿದ್ದಲ್ಲದೆ, ವೇದಿಕೆಯ ಕುರ್ಚಿಗಳನ್ನೆಲ್ಲಾ ಕಿತ್ತೆಸೆದಿದ್ದಾರೆ. ಈ ಘಟನೆಗೆ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ.
< Eesanje News 24/7 ನ್ಯೂಸ್ ಆ್ಯಪ್ >