ಎರಡನೇ ಅವಧಿಗೂ ನಗರಸಭೆ ಕಾಂಗ್ರೆಸ್ ಪಾಲು
ಕನಕಪುರ, ಸೆ.28- ನಗರಸಭೆಯ 2ನೇ ಅವಧಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯ ಕೆ.ಎನ್.ದಿಲೀಪ್, ಉಪಾಧ್ಯಕ್ಷರಾಗಿ 17ನೇ ವಾರ್ಡಿನ ಸದಸ್ಯ ಕೆ.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾದರು.ಮೊದಲನೇ ಅವಧಿಯ ಅಧ್ಯಕ್ಷ ಅಮೀರ್ಖಾನ್ ಹಾಗೂ ಉಪಾಧ್ಯಕ್ಷೆ ಉಮಾರವರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ದಿಲೀಪ್ ಹಿಂದುಳಿದ ವರ್ಗ (ಅ) ಪಂಗಡಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜಗನ್ನಾಥ್ರವರನ್ನು ಹೊರತುಪಡಿಸಿದರೆ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಈ ಇಬ್ಬರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ದಿಲೀಪ್, ಪಟ್ಟಣದಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸಿ ಆಯ್ಕೆಗೆ ಕಾರಣೀಭೂತರಾದ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ರವರ ಹೆಸರಿಗೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸುವುದಾಗಿ ಅವರು ಹೇಳಿದರು.
ಎಂ.ಎಲ್.ಸಿ. ರವಿ, ಜಿಪಂ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ.ಡಿ.ವಿಜಯದೇವ್, ತಾಪಂ ಮಾಜಿ ಅಧ್ಯಕ್ಷ ಪುರುಶೋತ್ತಮ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಯಸಂದ್ರರವಿ, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್, ಕುರುಪೇಟೆ ಲೋಕೇಶ್ ಸೇರಿದಂತೆ ನೂರಾರು ಮಂದಿ ಪಕ್ಷದ ಕಾರ್ಯಕರ್ತ ಮುಖಂಡರು ಹೂಗುಚ್ಛ ನೀಡಿ ಅಭಿನಂದಿಸಿದರು.