ಕಾಶ್ಮೀರ ಹಿಂಸೆ ಹತ್ತಿಕ್ಕಿ : ಭಾರತಕ್ಕೆ ಪಾಕ್ ಉಪದೇಶ
ಬಲೂಚಿಸ್ತಾನ್, ಆ.18- ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಹೇಳಿಕೆ ನೀಡುವುದಕ್ಕಿಂತ ಮೊದಲು ಪ್ರಧಾನಿ ಮೋದಿ ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯಗಳತ್ತ ಗಮನಹರಿಸಲಿ. ದೇಶದ ಸಾರ್ವಭೌಮತೆಯನ್ನು ರಕ್ಷಿಸುವ ತಾಕತ್ತು ಪಾಕಿಸ್ತಾನಕ್ಕಿದೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಬಿಲಾವಲ್ ಭುಟ್ಟೋ ಹೇಳಿದ್ದಾರೆ. ಬಲೂಚಿಸ್ತಾನ್ , ಗಿಲ್ಗಿಟ್ ಮತ್ತು ಪಿಒಕೆ ಬಗ್ಗೆ ಪ್ರಧಾನಿ ಮೋದಿ ನೀಡಿದ ಹೇಳಿಕೆಗಳು ಪ್ರಚೋದನಾಕಾರಿ, ಬೇಜವಾಬ್ದಾರಿ ಮತ್ತು ಹಿಂಸಾತ್ಮಕವಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ಕಾಶ್ಮೀರಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ದೇಶದಲ್ಲಿ ಮುಸ್ಲಿಮರು, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಮೋದಿ ವಿವರಣೆ ನೀಡಲಿ ಎಂದು ಪಿಪಿಪಿ ಪಕ್ಷದ ಮುಖ್ಯಸ್ಥ ಬಿಲಾವಲ್ ಸವಾಲ್ ಹಾಕಿದ್ದಾರೆ. ಬಲೂಚಿಸ್ತಾನ್ ಪಾಕಿಸ್ತಾನ ದೇಶದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನದ ಅಂತರಿಕ ವಿಷಯಗಳ ಬಗ್ಗೆ ಮೋದಿಯವರಿಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳುಗಳಲ್ಲಿ ಕಾಶ್ಮಿರ ಹೊತ್ತಿ ಉರಿಯುತ್ತಿದೆ. ಮುಗ್ದ ಕಾಶ್ಮೀರಿಗರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದಲ್ಲಿ ಕೆಲವರು ಗೆಳೆಯರಿರಬಹುದು.ಆದರೆ, ಪಾಕಿಸ್ತಾನದ ಜನತೆ ಬಲೂಚಿಸ್ತಾನ್ ಅಥವಾ ದೇಶದ ಯಾವುದೇ ಅಂತರಿಕ ಸಮಸ್ಯೆಗಳ ಬಗ್ಗೆ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಪರೋಕ್ಷವಾಗಿ ಪಾಕಿಸ್ತಾನದ ವಿಪಕ್ಷ ನಾಯಕ ಬಿಲಾವಲ್ ಭುಟ್ಟೋ ಟಾಂಗ್ ನೀಡಿದ್ದಾರೆ.
► Follow us on – Facebook / Twitter / Google+