ಕುರಿ ರಕ್ತ ಹೀರುತ್ತಿರುವ ಚಿರತೆ ಹಿಡಿಯಲು ಆಗ್ರಹ
ಹುಳಿಯಾರು, ಫೆ.13- ಕುರಿ ರಕ್ತದ ರುಚಿ ಕಂಡ ಚಿರತೆ ಪದೇ ಪದೇ ಗ್ರಾಮದೊಳಗೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸುತ್ತಿದ್ದು, ಗ್ರಾಮಸ್ಥರು ಇದರಿಂದ ತೀವ್ರ ಆತಂಕಗೊಂಡಿದ್ದಾರೆ.
ಹುಳಿಯಾರು ಹೋಬಳಿ ಮಾರುಹೊಳೆಯ ಕರಿಯಪ್ಪನವರ 2 ಕುರಿಗಳು, ಪ್ರಕಾಶ್ನವರ 3 ಕುರಿಗಳು, ಜಯಣ್ಣನವರ 4 ಕುರಿಗಳು, ರಾಮಯ್ಯನವರ 2 ಕುರಿಗಳು, ಲಕ್ಷ್ಮಣ್ಣನವರ 2 ಕುರಿಗಳು ಹೀಗೆ ಒಳೆದೆರಡು ತಿಂಗಳಲ್ಲಿ ಹದಿನೈದಿಪ್ಪತ್ತು ಕುರಿಗಳು ಬಲಿಯಾಗಿವೆ.ಕುರಿ ರಕ್ತದ ರುಚಿ ಕಂಡಿರುವ ಚಿರತೆ ಊರೊಳನೆ ನುಗ್ಗಿ ಕುರಿಗಳ ಮೇಲೆ ದಾಳಿ ಮಾಡುತ್ತಿದೆ. ಅಲ್ಲದೆ ಊರಿನವರು ಹೊಲ, ತೋಟಕ್ಕೆ ಹೋದಾಗ ಚಿರತೆ ಓಡಾಡುತ್ತಿರುವುದನ್ನು ಕಣ್ಣಾರೆ ಕಂಡು ಗಾಬರಿಗೊಂಡಿರುವವರು ಇದ್ದಾರೆ.
ಚಿರತೆ ದಾಳಿಯಿಂದ ಮಾರುಹೊಳೆಯಲ್ಲಿ ಗ್ರಾಮಸ್ಥರಿಗೆ ನೆಮ್ಮದಿಯಿಲ್ಲದಂತಾಗಿದ್ದು , ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಅದೆಷ್ಟು ಬಾರಿ ದೂರು ನೀಡಿದರೂ ಗಮನ ಹರಿಸುತ್ತಿಲ್ಲ. ಕಚೇರಿಗೆ ಹೋಗಿ ತಮ್ಮ ಅಳಲನ್ನು ತೋಡಿಕೊಂಡರೆ ನಮ್ಮಲ್ಲಿರೋದೆ ಒಂದು ಬೋನು ಅದನ್ನಾಗಲೆ ಕರಡಿ ಹಿಡಿಯಲು ಗುರುವಾಪುರ ಗ್ರಾಮದಲ್ಲಿ ಇಡಲಾಗಿದೆ ಎಂದು ಅಸಹಾಯಕತೆ ಪ್ರದರ್ಶಿಸುತ್ತಾರೆ. ಇನ್ನಾದರೂ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಚಿರತೆ ಹಿಡಿದು ಗ್ರಾಮದಲ್ಲಿ ನೆಮ್ಮದಿ ವಾತಾವರಣೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >