ಕೇರಳದ ಕೊಚ್ಚಿಯಲ್ಲೇ ಪ್ರಧಾನಿ ಮೋದಿಯನ್ನು ಮುಗಿಸಲು ನಡೆದಿತ್ತೇ ಸಂಚು ..?
ಕೊಚ್ಚಿ(ಕೇರಳ), ಜೂ.21-ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿಯವರು ಕೇರಳದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದ ಕೊಚ್ಚಿ ಮೆಟ್ರೋವನ್ನು ಉದ್ಘಾಟಿಸಿದ್ದರು. ಆಗ ಕೇರಳದ ಕೊಚ್ಚಿಯಲ್ಲಿದ್ದ ನರೇಂದ್ರ ಮೋದಿ ಅವರ ಹತ್ಯೆಗೆ ಭಯೋತ್ಪಾದಕ ತಂಡವೊಂದು ಸಕಲ ಸಿದ್ಧತೆ ನಡೆಸಿಕೊಂಡಿತ್ತು ಎಂಬ ಆಘಾತಕಾರಿ ಅಂಶವನ್ನು ಗುಪ್ತಚರ ದಳವೊಂದು ಬಯಲಿಗೆಳೆದಿದೆ. ಈ ಮಾಹಿತಿಯನ್ನು ಕೇರಳ ಪೊಲೀಸರೂ ಖಚಿತ ಪಡಿಸಿದ್ದು, ಅಂದು ಮೋದಿಯಿದ್ದ ಸ್ಥಳದ ಬಳಿಯ ಪುದುವ್ಯಾಪೀನ್ ಎಂಬ ಸ್ಥಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದನ್ನು ತಡೆಯುವಲ್ಲಿ ಅಲ್ಲಿನ ಪೊಲೀಸರು ಯಶಸ್ವಿಯಾಗಿದ್ದರು.
ಈ ಪ್ರತಿಭಟನೆಯ ಗುಂಪಿನಲ್ಲೇ ಭಯೋತ್ಪಾದಕ ತಂಡವೊಂದೂ ಇತ್ತು ಎಂದು ಇಲ್ಲಿನ ಡೆಪ್ಯುಟಿ ಜನರಲ್ ಆಫ್ ಪೊಲೀಸ್ ಟಿ.ಪಿ.ಸೇನುಕುಮಾರ್ ತಿಳಿಸಿದ್ದು, ಇನ್ನೂ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಸಂಚಿನ ಹಿಂದೆ ಯಾವ ಭಯೋತ್ಪಾದಕ ಗುಂಪು ಕೆಲಸ ಮಾಡಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >