ಗೃಹ ಕಚೇರಿ ಕೃಷ್ಣ ಆವರಣದಲ್ಲಿ ನೂತನವಾಗಿ ‘ವರುಣ ಸ್ಟುಡಿಯೋ’ ಉದ್ಘಾಟಿಸಿದ ಸಿಎಂ

ಬೆಂಗಳೂರು, ಮೇ 11- ಎಲ್ಲಾ ಮಾಧ್ಯಮಗಳ ಜತೆಗೆ ಮುಖ್ಯಮಂತ್ರಿಗಳ ಸಂವಾದಕ್ಕೆ ಅಗತ್ಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ಗೃಹ ಕಚೇರಿ ಕೃಷ್ಣ ಆವರಣದಲ್ಲಿ ನೂತನವಾಗಿ ವರುಣ ಸ್ಟುಡಿಯೋ ನಿರ್ಮಿಸಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸ್ಟುಡಿಯೋ ಉದ್ಘಾಟನೆ ನೆರವೇರಿಸಿದ್ದು, ಈ ಹೊಸ ಸ್ಟುಡಿಯೋ ಅಸ್ಥಿತ್ವಕ್ಕೆ ಬಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಮಾಧ್ಯಮಗಳ ಅವಶ್ಯಕತೆಯನ್ನು ಗಣನೆಗೆ ತೆಗೆದುಕೊಂಡು ಸುಸಜ್ಜಿತ ಸ್ಟುಡಿಯೋ ನಿರ್ಮಾನ ಮಾಡಲಾಗಿದ್ದು, ಮುಖ್ಯಮಂತ್ರಿಗಳ ವಸತಿ ಮತ್ತು ಗೃಹ ಕಚೇರಿಗಳಲ್ಲಿ ಸ್ಥಳಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ಕೃಷ್ಣಾಗೆ ಹೊಂದಿಕೊಂಡಂತೆ ಸ್ಟುಡಿಯೋ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿಗಳನ್ನು ಸಂದರ್ಶಿಸಲು ಅನುಕೂಲವಾಗುವಂತಹ ಆಸನ ವ್ಯವಸ್ಥೆ, ಬೆಳಕು, ಬದಲಾಯಿಸಬಹುದಾದ ಹಿನ್ನೆಲೆ ಪರದೆ, ಟೆಲಿಪ್ರಾಂಪ್ಟರ್, ರೆಕಾಡಿಂಗ್ ಸಲಕರಣೆಗಳು, ಕಂಪ್ಯೂಟರ್ ಮತ್ತಿತರ ಸೌಲಭ್ಯಗಳನ್ನು ಒದಗಿಸಿ ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ವರದಿಗಾರರು ನೇರವಾಗಿ ಸಂದರ್ಶನ ಮಾಡಲು ಅನುಕೂಲವಾಗುವಂತೆ ಎಲ್ಲಾ ರೀತಿಯಲ್ಲೂ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಕಾಲ ಕಾಲಕ್ಕೆ ಮುಖ್ಯಮಂತ್ರಿಗಳು ನೀಡುವ ಸಂದೇಶಗಳು, ಹೇಳಿಕೆಗಳ ರೆಕಾರ್ಡಿಂಗ್ ಸಹ ಸ್ಟುಡಿಯೋದಲ್ಲಿ ನಡೆಯಲಿದೆ. ಈ ಸ್ಟುಡಿಯೋಗೆ ವರುಣ ಎಂದು ಹೆಸರಿಡಲಾಗಿದೆ. ಹೆಸರಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ತಮ್ಮ ಕ್ಷೇತ್ರದ ಹೆಸರಲ್ಲ, ಆದರೆ, ವರುಣ ಎಂದರೆ ಮಳೆ ದೇವರ ಹೆಸರು ಎಂದರು.
ನಮ್ಮ ಅಧಿಕೃತ ನಿವಾಸದ ಹೆಸರು ಕಾವೇರಿ ಎಂದಿದೆ, ಅದೇನು ಮಡಿಕೇರಿಯೇ ಎಂದು ಪ್ರಶ್ನಿಸಿದ ಸಿಎಂ, ಈ ಮೊದಲು ಮಾಧ್ಯಮದವರು ಮನೆಗೆ ಬರುತ್ತಿದ್ದರು. ಸಂದರ್ಶನ ಮತ್ತಿತರ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲು ಈ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.
< Eesanje News 24/7 ನ್ಯೂಸ್ ಆ್ಯಪ್ >