ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆ ವಿಸರ್ಜನೆ
ಚಿಕ್ಕಮಗಳೂರು, ಆ.21- ಜಿಲ್ಲೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಎರಡು ಸಂಘಟನೆಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಭಜರಂಗದಳದ ಪ್ರಾಂತೀಯ ಸಂಚಾಲಕ ಶರಣ್ ಪಂಪ್ವೇಲ್ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರವೀಣ್ ಖಾಂಡ್ಯ ಮತ್ತು ಪ್ರದೀಪ್ ಹೆಸರು ಕೇಳಿಬಂದಿದ್ದು, ಇದರಿಂದ ಜಿಲ್ಲೆಯಲ್ಲಿ ಸಂಘಟನೆಗೆ ಮಸಿ ಬಳಿದಂತಾಗಿದೆ. ಹೀಗಾಗಿ ಈ ಎರಡೂ ಸಂಘಟನೆಗಳ ಎಲ್ಲ ಪದಾಧಿಕಾರಿಗಳ ಹುದ್ದೆಗಳನ್ನು ರದ್ದುಗೊಳಿಸಿ ತಾತ್ಕಾಲಿಕವಾಗಿ ವಿಸರ್ಜನೆ ಮಾಡಲಾಗಿದೆ ಎಂದು ಹೇಳಿದರು.
ಗೋ ರಕ್ಷಣೆಗೆ ಹಲ್ಲೆ ಮಾಡುವಂತೆ ನಮ್ಮ ಸಂಘಟನೆ ಎಲ್ಲಿಯೂ ಹೇಳಿಲ್ಲ, ಇದು ನಮ್ಮ ಸಿದ್ಧಾಂತವೂ ಅಲ್ಲ. ಹಿಂದೂ ಸಂಪ್ರದಾಯದ ರಕ್ಷಣೆ ಮಾಡುವುದಷ್ಟೆ ನಮ್ಮ ಹೋರಾಟ. ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರ ಅದೇ ಮಾದರಿಯಲ್ಲಿಯೇ ಧರ್ಮದ ರಕ್ಷಣೆಗೆ ಕಾನೂನು ಜಾರಿಗೆ ತರಲಿ ಎಂದರು. ಸರ್ಕಾರ ಗೋ ರಕ್ಷಣೆ ತಡೆಯಲು ಕಾನೂನು ಜಾರಿ ಮಾಡಿದ್ದರೂ ಸಹ ಎಲ್ಲೆಡೆ ಕಸಾಯಿ ಖಾನೆಗಳು ತಲೆ ಎತ್ತಿವೆ. ಹಾಗಾಗಿ ಸರ್ಕಾರ ಕಟ್ಟುನಿಟ್ಟಾಗಿ ಕಾನೂನು ಚೌಕಟ್ಟು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಂಘಟನೆ ಕಾರ್ಯಕರ್ತ ಪ್ರವೀಣ್ ಖಾಂಡ್ಯ ವಿರುದ್ಧ ಒಟ್ಟು 22 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 21 ಪ್ರಕರಣಗಳು ರಾಜಕೀಯ ಪಕ್ಷಕ್ಕೆ ಸೇರಿದ್ದು, ಒಂದು ಮಾತ್ರ ನಮ್ಮ ಸಂಘಟನೆಗೆ ಸಂಬಂಧಿಸಿದ್ದು. ಇದು ಸಂಘಟನೆಗೆ ಕಪ್ಪುಚುಕ್ಕೆಯಾಗಿದೆ ಎಂದು ವಿಷಾದಿಸಿದರು. ಸ್ಥಳೀಯ ಮುಖಂಡರಾದ ಹರೀಶ್ ಶೆಟ್ಟಿ, ಪ್ರೀತಮ್ ಕಿರಣ್ ಮತ್ತು ಯೋಗೇಶ್ರಾಜ್ ಅರಸ್ ಇದ್ದರು.