ಟವರ್ ಮೇಲಿದ್ದ ಧ್ವಜವಿಳಿಸುವಾಗ ವಿದ್ಯುತ್ ಶಾಕ್ : ಹುಕ್ಕೇರಿ ತಾಲ್ಲೂಕಿನ ಯೋಧ ಸಾವು
ಶ್ರೀನಗರ/ಬೆಳಗಾವಿ,ಆ.17- ಟವರ್ ಮೇಲೆ ಹಾರಿಸಿದ್ದ ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಯೋಧನೊಬ್ಬ ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಬೆಳಗಾವಿಯ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಗ್ರಾಮದ ಯೋಧ ಸಾಗರ ಕುಂಬಾರ(25) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿಆರ್ಪಿಎಫ್ನಲ್ಲಿ ಕೆಲಸ ಮಾಡುತ್ತಿದ್ದ ಇವರು ಕಳೆದ ಆ.14ರಂದು ಯಾರೋ ಕಿಡಿಗೇಡಿಗಳು ಮೊಬೈಲ್ ಟವರ್ ಮೇಲೆ ಪಾಕ್ ಧ್ವಜವನ್ನು ಹಾರಿಸಿದ್ದರು. ಇದನ್ನು ನೋಡಿದ ಯೋಧ ಸಾಗರ್ ಮೇಲೇರಿ ಬಾವುಟ ಕಿತ್ತು ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಆದರೆ ಸಂಜೆ ಅದನ್ನು ತೆಗೆಯಲು ಮತ್ತೆ ಮೇಲೇರಿದಾಗ ವಿದ್ಯುತ್ ಶಾಕ್ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಇಂದು ಯೋಧನ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಬರಲಿದೆ ಎಂದು ಹುಕ್ಕೇರಿಯ ತಹಸೀಲ್ದಾರ್ ಎಸ್.ಎಸ್.ಬಳ್ಳಾರಿ ತಿಳಿಸಿದ್ದಾರೆ.
► Follow us on – Facebook / Twitter / Google+