ದರೋಡೆಯಾದ ಮನೆಯಲ್ಲೇ ಮತ್ತೊಮ್ಮೆ ದರೋಡೆಗೆ ಯತ್ನ..!
ಕಲಬುರಗಿ, ಮೇ 3-ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಖಜೂರಿ ಗ್ರಾಮದ ಮನೆಗೆ ವಾರ ಕಳೆಯುವುದರಲ್ಲೇ ಮತ್ತೆ ಕಳುವಿಗೆ ಯತ್ನಿಸಲಾಗಿದೆ. ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಏ.28ರ ರಾತ್ರಿ ಮನೆಗೆ ನುಗ್ಗಿ ಸೋನಾಬಾಯಿ ಬಂಡೆ (60) ಎಂಬುವರನ್ನು ಹತ್ಯೆ ಮಾಡಿ ಇನ್ನು ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಮೃತಪಟ್ಟ ಮಹಿಳೆ ಹಾಗೂ ಗಾಯಗೊಂಡವರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಉಮಾರ್ಗಾ ಗ್ರಾಮದವರಾಗಿದ್ದು, ಜಾತ್ರೆ ನಿಮಿತ್ತ ಖಜೂರಿ ಗ್ರಾಮಕ್ಕೆ ಬಂದಿದ್ದರು.
ಘಟನೆಯಲ್ಲಿ ಗಾಯಗೊಂಡವರು ಉಮಾರ್ಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಖಜೂರಿ ಗ್ರಾಮದ ಮನೆಗೆ ಬೀಗ ಹಾಕಲಾಗಿದೆ. ನಿನ್ನೆ ಇದೇ ಮನೆ ಬೀಗ ಮುರಿದು ಮತ್ತೆ ಕಳವಿಗೆ ಯತ್ನಿಸಲಾಗಿದೆ. ಇದರಿಂದ ಬಂಡೆ ಕುಟುಂಬದವರು ಭಯಭೀತರಾಗಿದ್ದಾರೆ. ಈ ಸಂಬಂಧ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS