ದೆಹಲಿಯಲ್ಲಿ ಇಂದೂ ಮುಂದುವರಿದ ದಟ್ಟ ಮಂಜು : 30 ರೈಲುಗಳ ಸಂಚಾರ ವಿಳಂಬ
ನವದೆಹಲಿ, ಡಿ.26-ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜಿನ ತೆರೆಯ ವಾತಾವರಣ ಮುಂದುವರಿದಿದೆ. ಉತ್ತರ ಮಾರ್ಗವಾಗಿ ಸಂಚರಿಸಬೇಕಿದ್ದ 30 ರೈಲುಗಳು ವಿಳಂಬವಾಗಿದ್ದು, 10 ಮಾರ್ಗಗಳು ರದ್ದಾಗಿವೆ. ಹಿಮ ಮುಸುಕಿದ ವಾತಾವರಣದಿಂದ ವಿಮಾನಗಳ ಸಂಚಾರಕ್ಕೂ ಅಡಚಣೆಯಾಗಿದೆ. ಹಿಮಾವೃತ ವಾತಾವರಣದಿಂದ ಕಳೆದ ಆರು ದಿನಗಳಿಂದ ರೈಲುಗಳು ವಿಳಂಬವಾಗಿದ್ದು, ಇತರ ಮಾರ್ಗಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಿವೆ.
ದೆಹಲಿಯಲ್ಲಿ ಇಂದು ಬೆಳಗ್ಗೆ 9.4 ಡಿಗ್ರಿ ಸೆಲ್ಸಿಯಸ್ಗಳಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ದಟ್ಟ ಮಂಜು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ರೈಲುಗಳ ಸಂಚಾರ ವಿಳಂಬವಾಗುವುದು ಮತ್ತು ರದ್ದಾಗುವುದು ಸಾಮಾನ್ಯವಾಗಿದೆ. ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಮದ ಹೊದಿಕೆಯಿಂದಾಗಿ ಮಬ್ಬು ದೃಷ್ಟಿಯ ಕಾರಣ ಕೆಲವು ವಿಮಾನಗಳ ಹಾರಾಟಕ್ಕೂ ಅಡ್ಡಿಯಾಗಿತ್ತು. ದೆಹಲಿ, ಉತ್ತರಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ತಾನ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಪ್ರಾಂತ್ಯಗಳೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶೀತಹವೆ ಮುಂದುವರಿದಿದೆ.