ನಾಟಕಗಳ ಉಳಿವಿಗೆ ಮಠಮಾನ್ಯಗಳ ಶ್ರಮ ಶ್ಲಾಘನೀಯ
ಚಿತ್ರದುರ್ಗ ,ನ.5-ನಾಟಕ ಪ್ರಭಾವಶಾಲಿ ಮಾಧ್ಯಮ. ನಾಟಕದ ಪಾತ್ರಧಾರಿಗೆ ಸೌಂದರ್ಯ, ಧ್ವನಿ ಇವು ಪ್ರಮುಖವಾಗುತ್ತವೆ. ಕಲಾವಿದರ ಸಂತತಿ ಕಡಿಮೆಯಾಗಿದೆ. ನಶಿಸಿಹೋಗುವ ಸಂದರ್ಭದಲ್ಲಿ ನಾಟಕಗಳು ಉಳಿಯಬೇಕೆಂದು ಅನೇಕ ಮಠಮಾನ್ಯಗಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಆಂಜನೇಯ ತಿಳಿಸಿದರು. ನಗರದ ಜಮುರಾ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಜಮುರಾ ನಾಟಕೋತ್ಸವದ 3ನೇ ದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ಮುರುಘಾ ಶರಣರು ನಾಟಕಗಳನ್ನು ರಚಿಸಿ ನಿರ್ದೇಶಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸಿನೆಮಾ ಮತ್ತು ದೃಶ್ಯ ಮಾಧ್ಯಮದಿಂದ ನಾಟಕ ಸಂಸ್ಕೃತಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಎಂದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೂಡ್ಲಿಗಿಯ ಹಿರಿಯ ರಂಗಕಲಾವಿದೆ ಪದ್ಮಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಹಳ ಕಷ್ಟಪಟ್ಟು ನೋವುಗಳನ್ನು ಅನುಭವಿಸಿ ನಾಟಕದಲ್ಲಿ ಅಭಿನಯಿಸುತ್ತ ಬಂದವಳು ನಾನು. ಟಿವಿ ಮಾಧ್ಯಮಗಳು ಬಂದ ಮೇಲೆ ನಾಟಕ ನೋಡುವವರ ಮತ್ತು ಅಭಿನಯಿಸುವವರ ಸಂಖ್ಯೆ ಕಡಿಮೆಯಾಗಿದೆ. ಕಲಾಸೇವೆಗಾಗಿ ನನಗೆ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು. ಡಾ. ಶಿವಮೂರ್ತಿ ಮುರುಘಾ ಶರಣರು ದಿವ್ಯಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ. ನೀಲಮ್ಮ ಉಪಸ್ಥಿತರಿದ್ದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ| ದೊಡ್ಡಮಲ್ಲಯ್ಯ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮಯ್ಯ ಸ್ವಾಮೀಜಿ ಮತ್ತಿತರರಿದ್ದರು. ನಂತರ ಹೆಚ್.ಎಸ್. ಶಿವಪ್ರಕಾಶ್ ರಚನೆ, ವೆಂಕಟರಮಣ ಐತಾಳ್ ನಿರ್ದೇಶಿಸಿರುವ ಕಾಲಂದುಗೆಯ ಕಥೆ ನಾಟಕವನ್ನು ಹೆಗ್ಗೋಡಿನ ನೀನಾಸಮ್ ತಂಡದವರು ಅಭಿನಯಿಸಿದರು.