ನೆರೆ ರಾಜ್ಯಗಳ ಚಿತ್ರಮಂದಿರಗಳಲ್ಲೂ`ಮನಸು ಮಲ್ಲಿಗೆ ‘ ರಿಲೀಸ್
ಬೆಂಗಳೂರು, ಮಾ.31- ರಾಕ್ಲೈನ್ ವೆಂಕಟೇಶ್ ಮತ್ತು ಆಕಾಶ್ ಚಾವ್ಲಾ ನಿರ್ಮಿಸಿ, ಎಸ್.ನಾರಾಯಣ್ ನಿರ್ದೇಶಿಸಿರುವ `ಮನಸು ಮಲ್ಲಿಗೆ’ ಚಿತ್ರವು ಇಂದು ರಾಜ್ಯದ ನೂರಾರು ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ನೆರೆ ರಾಜ್ಯಗಳ ಸುಮಾರು ನೂರು ಥಿಯೇಟರ್ಗಳಲ್ಲಿ ಬಿಡುಗಡೆ ಆಗುತ್ತಿದೆ. ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ 15 ಚಿತ್ರಮಂದಿರಗಳು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಭುವನೇಶ್ವರ್, ಡಾರ್ಜಿಲಿಂಗ್ ಮತ್ತು ಹರಿಯಾಣ, ಗುಜರಾತ್, ಬಂಗಾಳ ರಾಜ್ಯದ ಹಲವು ಕಡೆ ಮನಸು ಮಲ್ಲಿಗೆ ಅರಳುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯಗಳಲ್ಲಿ ಬಿಡುಗಡೆ ಆಗುತ್ತಿದೆ. ಆದರೆ, ಕನ್ನಡ ಚಿತ್ರವೊಂದು ಕರ್ನಾಟಕದ ಹೊರಗೆ ಈ ಪ್ರಮಾಣದಲ್ಲಿ ತೆರೆಕಂಡಿರಲಿಲ್ಲ ಎಂದು ಎಸ್.ನಾರಾಯಣ್ ತಿಳಿಸುತ್ತಾರೆ. ಸೈರಾಟ್ ಎಂಬ ಅತ್ಯಂತ ಯಶಸ್ವೀ ಮರಾಠಿ ಚಿತ್ರವನ್ನು ಸೂಕ್ತ ಬದಲಾವಣೆಗಳೊಂದಿಗೆ ಮನಸು ಮಲ್ಲಿಗೆ ಹೆಸರಿನಲ್ಲಿ ಕನ್ನಡಕ್ಕೆ ರೀಮೇಕ್ ಮಾಡಿದ್ದಾರೆ. ಸೀಮಿತ ಬಂಡವಾಳದಲ್ಲಿ ತಯಾರಾದ ಆ ಚಿತ್ರವು ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ.
ನಿನ್ನೆ ಏರ್ಪಡಿಸಲಾಗಿದ್ದ ಮನಸು ಮಲ್ಲಿಗೆ ಚಿತ್ರದ ವಿಶೇಷ ಪ್ರದರ್ಶನಕ್ಕೆ ಅಂಬರೀಶ್, ಸುಮಲತಾ ಅಂಬರೀಶ್, ರಮೇಶ್, ಶೃತಿ, ಯಶ್, ರಾಧಿಕಾಪಂಡಿತ್, ಹಂಸಲೇಖ, ಟಿ.ವೆಂಕಟೇಶ್ ಮುಂತಾದ ಹಲವು ಗಣ್ಯರು ಆಗಮಿಸಿ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
< Eesanje News 24/7 ನ್ಯೂಸ್ ಆ್ಯಪ್ >