ನ್ಯಾಯಾಧೀಶರ ನೇಮಕಾತಿಗೆ ಕೇಂದ್ರ ಸರ್ಕಾರ ಚಾಲನೆ
ನವದೆಹಲಿ, ಫೆ.3-ಸುಪ್ರೀಂಕೋರ್ಟ್ ಹಾಗೂ ವಿವಿಧ ಹೈಕೋರ್ಟ್ಗಳಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ನೇಮಕಾತಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಐದು ಮಂದಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್ಗೆ ಮುಂಬಡ್ತಿ ಹಾಗೂ ನಾಲ್ಕು ಮಂದಿ ನ್ಯಾಯಾಧೀಶರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವಂತೆ ಕೊಲಿಜಿಯಮ್ ಶಿಫಾರಸು ಮಾಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಖೆಹರ್ ಅವರು ಕೊಲಿಜಿಯಮ್ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜೆ.ಚಲಮೇಶ್ವರ್, ರಂಜನ್ ಗೋಗೈ ಮತ್ತು ಮದನ್ ಬಿ.ಲೋಕರ್ ಸಮಿತಿಯ ಸದಸ್ಯರಾಗಿದ್ದಾರೆ.
ಈ ಸಮಿತಿಯು ಶಿಫಾರಸು ಮಾಡಿರುವಂತೆ ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನವೀನ್ ಸಿನ್ಹಾ, ಮದ್ರಾಸ್ ಹೈಕೋರ್ಟ್ನ ಸಂಜಯ್ ತ್ರಿಶೂಲ್ ಕೌಲ್, ಛತ್ತೀಸ್ಗಡದ ದೀಪಕ್ ಗುಪ್ತಾ, ಕೇರಳದ ಮೋಹನ್ ಎಂ.ಶಾಂತನಗೌಡರ್ ಹಾಗೂ ಕರ್ನಾಟಕದ ಅಬ್ದುಲ್ ನಜೀರ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಲಾಗಿದೆ. ಸಾಮಾನ್ಯವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್ಗೆ ಮುಂಬಡ್ತಿ ನೀಡುವುದು ಈವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ಇದೇ ಮೊದಲ ಬಾರಿಗೆ ಅಬ್ದುಲ್ ನಜೀರ್ ಅವರನ್ನು ಸುಪ್ರೀಂಕೋರ್ಟ್ಗೆ ಪರಿಗಣಿಸಲಾಗಿದೆ. ಈ ಹಿಂದೆ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಆರ್.ಸಿ.ಲಹೋಟಿ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS