ಪರಿಹಾರ ಕೊಡಿಸುವಲ್ಲಿ ರೈತ ಸಂಘ ಯಶಸ್ವಿ
ಚನ್ನಪಟ್ಟಣ,ಜ.6- ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಧನ ಕೊಡಿಸುವಲ್ಲಿ ಸಂಘ ಸಫಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಮು ತಿಳಿಸಿದರು.ತಾಲ್ಲೂಕಿನ ಚಿಕ್ಕೇನಹಳ್ಳಿಯಲ್ಲಿ ವಿದ್ಯುತ್ ಅವಘಡದಿಂದಾಗಿ ಮೃತಪಟ್ಟಿದ್ದ ಶಿವಣ್ಣರವರ ಧರ್ಮಪತ್ನಿ ಗೌರಮ್ಮ ಅವರಿಗೆ ಬೆಸ್ಕಾಂ ಕಚೇರಿಯಲ್ಲಿ ಪರಿಹಾರ ಧನ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಈ ಪ್ರಕರಣ ನಡೆದು ಸುಮಾರು ದಿನಗಳಾಗಿದ್ದು, ಪರಿಹಾರ ಧನ ನೀಡುವಲ್ಲಿ ಬೆಸ್ಕಾಂ ವಿಳಂಬ ಮಾಡಿದ್ದರೂ ಸಹ ಇದೀಗ ಮೃತರ ಕುಟುಂಬಕ್ಕೆ ಸರಿಯಾದ ರೀತಿಯಿಂದ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದು ಅವರಿಗೆ ಧನ್ಯವಾದ ತಿಳಿಸಿದರು. ತಾಲ್ಲೂಕಿನ ಮೆಣಸಿಗನಹಳ್ಳಿ, ಅಬ್ಬೂರುದೊಡ್ಡಿ ಹಾಗೂ ಚಿಕ್ಕೇನಹಳ್ಳಿಯಲ್ಲಿ ವಿದ್ಯುತ್ ಅವಘಡಗಳು ಸಂಭವಿಸಿವೆ. ಇಂತಹ ಪ್ರಕರಣಗಳು ನಡೆಯುತ್ತವೆ ಎಂದು ಊಹಿಸಿರಲಿಲ್ಲ ಇದು ನೋವಿನ ಸಂಗತಿಗಳೆಂದು ಅವರು ವಿಷಾದ ವ್ಯಕ್ತಪಡಿಸಿದರು.ಘಟನೆ ನಡೆದಾಗ ಕೆಲ ಕಿಡಿಗೇಡಿಗಳು ಅಧಿಕಾರಿಗಳ ಮೇಲೆರಗಲು ಮುಂದಾದದ್ದು ವಿಷಾದದ ವಿಚಾರವಾಗಿದ್ದು ಆ ಘಟನೆಗೆ ಮತ್ತೊಮ್ಮೆ ಕ್ಷಮೆ ಇರಲಿ ಎಂದರು.
ಪರಿಹಾರದ ಚೆಕ್ ವಿತರಿಸಿದ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ತಿಮ್ಮೇಗೌಡ, ಕಾರ್ಯದರ್ಶಿ ವಿಜಿಕುಮಾರ್, ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ವೆಂಕಟಪ್ಪ, ಬೆಸ್ಕಾಂ ಎಇಇ ಲಕ್ಷ್ಮೀಶ್, ಜೆಇ ಸತೀಶ್ ಹಾಗೂ ಬೆಸ್ಕಾಂ ಅಧಿಕಾರಿಗಳು ಮತ್ತು ರೈತ ಮುಖಂಡರು ಹಾಜರಿದ್ದರು.