ಪಾಕ್ಗೆ ತಕ್ಕ ಪಾಠ ಕಲಿಸಿ : ವಿವಿಧ ಪಕ್ಷಗಳ ಆಗ್ರಹ
ಚಿಕ್ಕಮಗಳೂರು, ಸೆ.20- ಭಯೋತ್ಪಾದಕ ಕೃತ್ಯಗಳನ್ನು ತಡೆಗಟ್ಟುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ಪಾಕಿಸ್ತಾನ ಜೊತೆ ರಾಜತಾಂತ್ರಿಕ ಸಂಬಂಧವನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಒತ್ತಾಯಿಸಿದರು.ಜಮ್ಮು-ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಮಾತನಾಡಿದ ವಿವಿಧ ಮುಖಂಡರು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚುತ್ತಿದೆ. ಉಗ್ರರ ದಾಳಿ ತಡೆಯಲು ಸರ್ಕಾರ ರಚನಾತ್ಮಕ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಬಾಯಿಯಲ್ಲಿ ಮಾತ್ರ ದೇಶಭಕ್ತಿ ಪಠಿಸುವ ಮೋದಿ ಸೈನಿಕರ ಮಾರಣ ಹೋಮ ನಡೆದಾಗ ಮೌನಕ್ಕೆ ಶರಣಾಗಿರುವುದು ಏಕೆ? ಕೂಡಲೇ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ಅಟ್ಟಹಾಸವನ್ನು ತಡೆಯಬೇಕು. ದೇಶದ ಪ್ರಗತಿಗೆ ಕಂಟಕವಾದ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಸರ್ಕಾರ ಮುಂದಾಗಬೇಕು. ದೇಶದ ಆಂತರಿಕ ಸೌಹಾರ್ದತೆ ಮತ್ತು ಏಕತೆಗೆ ಭಂಗ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಕೆ.ಪಿ.ರಾಧಾಕೃಷ್ಣ, ಸಿಪಿಐನ ಕಾರ್ಯದರ್ಶಿ ರೇಣುಕಾರಾಧ್ಯ, ಕಾಂಗ್ರೆಸ್ ವಕ್ತಾರ ಎ.ಎನ್.ಮಹೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.ನಂತರ ತಾಲ್ಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದವರೆಗೆ ಮುಖಂಡರು ಮೌನ ಮೆರವಣಿಗೆ ನಡೆಸಿದರು.
► Follow us on – Facebook / Twitter / Google+