ಬೆಂಗಳೂರಿನಲ್ಲಿ ಕಾಂಗ್ರೆಸ್ ಗೆ 13, ಬಿಜೆಪಿಗೆ 11, ಜೆಡಿಎಸ್ಗೆ 2 ಸ್ಥಾನ
ಬೆಂಗಳೂರು, ಮೇ 15- ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 26 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 11 ಹಾಗೂ ಜೆಡಿಎಸ್ 2 ಸ್ಥಾನಗಳಲ್ಲಿ ಜಯಬೇರಿ ಬಾರಿಸಿವೆ. ಶಾಸಕ ಬಿ.ಎನ್.ವಿಜಯ್ಕುಮಾರ್ ಅಕಾಲಿಕ ಮರಣದಿಂದ ಜಯನಗರ ಹಾಗೂ ವೋಟರ್ ಐಡಿ ಪತ್ತೆಯಾದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿಲ್ಲ. 26 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಎಸ್.ಟಿ.ಸೋಮಶೇಖರ್ಗೌಡ, ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಬೈರತಿ ಬಸವರಾಜ, ರೋಷನ್ ಬೇಗ್, ಕೃಷ್ಣಭೈರೇಗೌಡ, ಶಿವಣ್ಣ, ಅಖಂಡ ಶ್ರೀನಿವಾಸಮೂರ್ತಿ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಎನ್.ಎ.ಹ್ಯಾರಿಸ್, ಜಮೀರ್ ಅಹಮ್ಮದ್ ಖಾನ್ ಹಾಗೂ ಎಂ.ಕೃಷ್ಣಪ್ಪ ಅವರು ಜಯಗಳಿಸಿದ್ದಾರೆ. [ #ಕನ್ನಡಿಗರ ತೀರ್ಪು : ಕರ್ನಾಟಕ ವಿಧಾನಸಭಾ ಚುನಾವಣೆ -2018 ಫಲಿತಾಂಶ (Live) ]
ಬಿಜೆಪಿಯಿಂದ ರಘು, ಸುರೇಶ್ಕುಮಾರ್, ವಿ.ಸೋಮಣ್ಣ, ಸತೀಶ್ರೆಡ್ಡಿ, ಆರ್.ಅಶೋಕ್, ಎಂ. ಕೃಷ್ಣಪ್ಪ, ಡಾ.ಅಶ್ವತ್ಥ ನಾರಾಯಣ್, ರವಿ ಸುಬ್ರಹ್ಮಣ್ಯ, ಅರವಿಂದ ಲಿಂಬಾವಳಿ, ವಿಶ್ವನಾಥ್ ಮತ್ತು ಉದಯ ಗರುಡಾಚಾರ್ ಅವರುಗಳು ಗೆಲುವು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ರಾಜಕೀಯ ಬೆಳವಣಿಗೆಯಲ್ಲಿ ಶಾಸಕರಾದ ಜಮೀರ್ ಅಹಮ್ಮದ್ಖಾನ್ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ಗೆ ಜಿಗಿದು ಈ ಬಾರಿ ಕೈ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಜೆಡಿಎಸ್ನಿಂದ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಗೋಪಾಲಯ್ಯ ಈ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ. ದಾಸರಹಳ್ಳಿಯಲ್ಲಿ ಈ ಬಾರಿ ಜೆಡಿಎಸ್ನ ಮಂಜುನಾಥ್ ಗೆಲುವಿನ ನಗೆ ಬೀರಿದ್ದಾರೆ.
ಜವರಾಯಿಗೌಡ ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಶಾಸಕ ಎಸ್.ಟಿ. ಸೋಮಶೇಖರ್ಗೌಡ ಅವರನ್ನು ಪರಾಭವಗೊಳಿಸಿದ್ದರೆ, ದಾಸರಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರಾಜು ಅವರನ್ನು ಮಂಜುನಾಥ್ ಮಣಿಸುವ ಮೂಲಕ ನಗರದಲ್ಲಿ ಜೆಡಿಎಸ್ನಿಂದ ಮತ್ತೆ ಮೂವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ 2013ರ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಜಯ ಗಳಿಸಿದ್ದ ಕಾಂಗ್ರೆಸ್ ಈ ಬಾರಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಳೆದ ಬಾರಿ 12 ಸ್ಥಾನ ಜಯ ಗಳಿಸಿದ್ದ ಬಿಜೆಪಿ ಈ ಬಾರಿ 11 ಕ್ಷೇತ್ರಗಳನ್ನು ಉಳಿಸಿಕೊಂಡಿದ್ದರೆ, ಜೆಡಿಎಸ್ ಮೂರು ಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಜಯನಗರ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮರು ಚುನÁವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ.