ಮೂರು ಗ್ರಾಮಗಳಲ್ಲಿನ 12 ಮನೆಗಳಲ್ಲಿ ಸರಣಿ ಕಳ್ಳತನ : ಜನರಲ್ಲಿ ಆತಂಕ
ಚನ್ನಪಟ್ಟಣ, ಅ.19- ಮೂರು ಗ್ರಾಮಗಳಲ್ಲಿನ 12 ಮನೆಗಳಲ್ಲಿ ಸರಣಿ ಕಳ್ಳತನ ನಡೆದು ಲಕ್ಷಾಂತರ ರೂ. ಹಣ ಆಭರಣ ಕಳವು ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಾಲ್ಲೂಕಿನ ವಾಲೇತೋಪು, ಶ್ರೀರಾಂಪುರ, ಕೂಡ್ಲೂರು ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದ್ದು, ಜನತೆಯಲ್ಲಿ ಭಯ ಸೃಷ್ಟಿಯಾಗಿದೆ.ಒಂದೇ ದಿನದಲ್ಲಿ ಮೂರು ಗ್ರಾಮಗಳಲ್ಲಿ 12 ಮನೆ ಕಳವು ನಡೆದಿರುವುದರಿಂದ ಜನತೆ ಈ ಸರಣಿ ಕಳವಿನಿಂದ ಕಂಗಾಲಾಗಿದ್ದು, ಎಲ್ಲಾ ಗ್ರಾಮಗಳಲ್ಲೂ ಸರಣಿ ಕಳವು ಬಗ್ಗೆಯೇ ಚರ್ಚೆ ಪ್ರಾರಂಭವಾಗಿದೆ.
ಸರಣಿ ಕಳವು ನಡೆದಿರುವ ಗ್ರಾಮಗಳಲ್ಲಿ ಕೆಲವರು ಮನೆ ಬಾಗಿಲು ಹಾಕಿ ಬೇರೆ ಊರುಗಳಿಗೆ ತೆರಳಿದ್ದರೆನ್ನಲಾಗಿದ್ದು, ಕೆಲವರು ಮನೆಯಲ್ಲಿದ್ದರೂ ಅವರಿಗೆ ಅರಿವಿಲ್ಲದಂತೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.12 ಮನೆಗಳಲ್ಲಿ ಏಕಕಾಲದಲ್ಲಿ ಕಳವು ನಡೆದಿರುವುದರಿಂದ ಪೂರ್ವಭಾವಿ ಸಿದ್ದತೆ ಮೇಲೆ ಕಳ್ಳರ ತಂಡ ಈ ರೀತಿ ಕೃತ್ಯ ವೆಸಗಿರಬಹುದೆಂದು ಅಂದಾಜಿಸಲಾಗಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.