ಯಾದವೀ ಕಲಹ : ಅಖಿಲೇಶ್ಗೆ ರಾಮಗೋಪಾಲ್ ಯಾದವ್ ಬೆಂಬಲ
ಲಖನೌ, ಸೆ.15-ಉತ್ತರ ಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷದಲ್ಲಿ ಉದ್ಭವಿಸಿರುವ ಯಾದವೀ ಕಲಹಕ್ಕೆ ತೇಪೆ ಹಾಕುವ ಕೆಲಸಗಳು ನಡೆಯುತ್ತಿರು ವಾಗಲೇ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಬೆಂಬಲ ಸೂಚಿಸಿರುವ ಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್, ಪಕ್ಷದ ನಾಯಕರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಲಖನೌನಲ್ಲಿ ಇಂದು ಅಖಿಲೇಶ್ ಯಾದವರನ್ನು ಭೇಟಿ ಮಾಡುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಿಲೇಶ್ರನ್ನು ಪಕ್ಷದ ಉತ್ತರಪ್ರದೇಶ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ನಾಯಕರು ತಪ್ಪು ಮಾಡಿದ್ದಾರೆ ಎಂದರು. ಅಪಾರ್ಥ ಮತ್ತು ಹೊಂದಾಣಿಕೆ ಇಲ್ಲದ ಕಾರಣ ಈ ಭಿನ್ನಾಭಿಪ್ರಾಯ ತಲೆದೋರಿದೆ. ಇಂಥ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಪಕ್ಷದಲ್ಲಿ ಸಾಮಾನ್ಯ. ಇದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಮಧ್ಯೆ ಅಖಿಲೇಶ್ಗೆ ಬೆಂಬಲ ಸೂಚಿಸಿರುವ ಪಕ್ಷದ ಮತ್ತೊಬ್ಬ ಮುಖಂಡ ನರೇಶ್ ಅಗರ್ವಾಲ್, ಮುಂಬರುವ ಚುನಾವಣೆಯಲ್ಲಿ ಅಖಿಲೇಶ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.