ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿ 200 ತಂಡಗಳಿಂದ ನಡೆದಿದೆ ರಹಸ್ಯ ಕಾರ್ಯ
ನವದೆಹಲಿ/ಬೆಂಗಳೂರು, ಏ.20- ಉತ್ತರ ಪ್ರದೇಶದ ಮಾದರಿಯಲ್ಲೇ ಕರ್ನಾಟಕ ರಾಜ್ಯದ ಪ್ರತಿ ಹಳ್ಳಿಯಲ್ಲೂ ಸಂಶೋಧನೆ ನಡೆಸಿ ಅದರ ಆಧಾರದ ಮೇಲೆ ಚುನಾವಣೆ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಣತಂತ್ರ ರೂಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಮುನ್ನ ಪ್ರತಿ ಹಳ್ಳಿಯಲ್ಲೂ ಸಂಶೋಧನೆ ನಡೆಸಿ ದೊಡ್ಡ ಪ್ರಮಾಣದ ಬಹುಮತಗಳಿಸಿರುವ ಬಿಜೆಪಿ ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕೂಡ ಸಂಶೋಧನೆ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಸ್ಟರ್ ಪ್ಲಾನ್ (ಕ್ರಿಯಾಯೋಜನೆ) ಸಿದ್ಧತೆ ಮಾಡಿದ್ದಾರೆ.
ಮೋದಿ ಮತ್ತು ಷಾ ಜೋಡಿಯ ರಹಸ್ಯ ಸಂಶೋಧನೆ ಬಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮುಖಂಡರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ರಹಸ್ಯವಾಗಿ ಪ್ರತಿ ಜಿಲ್ಲೆಯಲ್ಲೂ ಐದು ತಂಡದಂತೆ ರಾಜ್ಯಾದ್ಯಂತ 200 ತಂಡಗಳು ಸಂಶೋಧನೆ/ಅಧ್ಯಯನ ನಡೆಸಲಿವೆ ಎಂದು ತಿಳಿದುಬಂದಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಇಂತಹ ರಣತಂತ್ರ ರೂಪಿಸಿರುವ ಮೋದಿ-ಷಾ ಜೋಡಿ ಪ್ರಬಲ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು. ಆಯಾ ಕ್ಷೇತ್ರದ ಉಮೇದುವಾರು ಮಾಹಿತಿ ಕೂಡ ಕಲೆ ಹಾಕಿ ಟಿಕೆಟ್ ನೀಡಬೇಕೋ, ಬೇಡವೋ ಎಂಬುದರ ಬಗ್ಗೆ ಅವರೇ ತೀರ್ಮಾನಿಸಲಿದ್ದಾರೆ. ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ರಹಸ್ಯವಾಗಿ ಅಮಿತ್ ಷಾ ಮತ್ತು ಮೋದಿ ಜೋಡಿ ಕಾರ್ಯಯೋಜನೆ ನಡೆಸಲಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >