ಶೀಲ ಶಂಕಿಸಿ ಹೆಂಡತಿಯನ್ನು ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ
ಮೈಸೂರು, ಡಿ.12-ಪತ್ನಿಯ ಶೀಲ ಶಂಕಿಸಿ ಕೊಲೆಗೈದಿದ್ದ ಪತಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಎಚ್ಡಿ ಕೋಟೆ ತಾಲೂಕಿನ ಬೀರಂಬಳ್ಳಿ ಗ್ರಾಮದ ವಾಸಿ ಪುಟ್ಟಸ್ವಾಮಿ ಶಿಕ್ಷೆಗೆ ಒಳಗಾದ ವ್ಯಕ್ತಿ. ಪುಟ್ಟಸ್ವಾಮಿ ಹಾಗೂ ನಾಗಮ್ಮ ವಿವಾಹವಾಗಿ 32 ವರ್ಷವಾಗಿತ್ತು. ಪತ್ನಿಯ ಶೀಲ ಶಂಕಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಈತ 2013ರ ಡಿ.7ರಂದು ಮದ್ಯಸೇವಿಸಿ ಬಂದು ಪತ್ನಿ ಜತೆ ಜಗಳವಾಡಿದ್ದಾನೆ.ಜಗಳ ವಿಕೋಪಕ್ಕೆ ತಿರುಗಿ ಪುಟ್ಟಸ್ವಾಮಿ ನಾಗಮ್ಮನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ತಕ್ಷಣವೇ ಆಕೆಯನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಿದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.
ಈ ಬಗ್ಗೆ ಎಚ್ಡಿ ಕೋಟೆ ಠಾಣೆ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೈಸೂರು 5ನೆ ಅಧಿಕ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೋಷಿಯವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 8 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ನಾಗಪ್ಪ ವಾದ ಮಂಡಿಸಿದ್ದರು.