ಸಂಜೆಯೊಳಗೆ ಯೋಧ ಸಂದೀಪ್ಕುಮಾರ್ ಪಾರ್ಥಿವ ಶರೀರ ಸ್ವಗ್ರಾಮಕ್ಕೆ
ನವದೆಹಲಿ, ಜ.31– ಕಳೆದ ವಾರವಷ್ಟೆ ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರದ ಗುರೇಜ್ ಸೇನಾ ಶಿಬಿರದ ಮೇಲೆ ಹಿಮಪಾತ ಕುಸಿದು ಹುತಾತ್ಮರಾಗಿರುವ ಹಾಸನ ಮೂಲದ ಯೋಧ ಸಂದೀಪ್ಕುಮಾರ್ ಅವರ ಪಾರ್ಥಿವ ಶರೀರ ಇಂದು ಸಂಜೆಯೊಳಗೆ ಸ್ವಗ್ರಾಮಕ್ಕೆ ತಲುಪಲಿದೆ. ಶ್ರೀನಗರದಿಂದ ದೆಹಲಿಗೆ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ತರಲಾಗಿತ್ತು. ಮಧ್ಯಾಹ್ನ ಸುಮಾರು 12.30ಕ್ಕೆ ದೆಹಲಿಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ದೆಹಲಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಯೋಧನ ಪಾರ್ಥಿವ ಶರೀರ ತಲುಪಿದ್ದು, ಬೆಂಗಳೂರಿನಿಂದ ಸೇನೆಯ ವಿಶೇಷ ವಾಹನದಲ್ಲಿ ಪಾರ್ಥಿವ ಶರೀರ ಹಾಸನದ ದೇವಿಹಳ್ಳಿಗೆ ತಲುಪಲಿದೆ. ಸ್ವಗ್ರಾಮ ದೇವಿಹಳ್ಳಿಯಲ್ಲಿ ಸಂದೀಪ್ಕುಮಾರ್ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಾಳೆ ಅಂತ್ಯಕ್ರಿಯೆ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೇವಿಹಳ್ಳಿಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >