ಸಮಾಜವಾದಿ ಪಕ್ಷ ಇಬ್ಭಾಗ : ಶಿವಪಾಲ್ ಹೊಸ ಪಕ್ಷ ಘೋಷಣೆ
ಲಕ್ನೋ, ಮೇ 5-ವಿಧಾನಸಭೆ ಚುನಾವಣೆಗೂ ಮುನ್ನವೇ ಒಡೆದ ಮನೆಯಾಗಿದ್ದ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಎರಡು ಹೋಳಾಗಿದೆ. ಮುಲಾಯಂರ ಸಹೋದರ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ತಾವು ಸಮಾಜವಾದಿ ಸೆಕ್ಯೂಲರ್ ಮೋರ್ಚಾ ಎಸ್ಎಸ್ಎಂ) ಎಂಬ ಪ್ರತ್ಯೇಕ ರಾಜಕೀಯ ಪಕ್ಷ ರಚಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ದೇಶದ ಅತಿದೊಡ್ಡ ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷದ ಅಸ್ತಿತ್ವ ಇಬ್ಭಾಗವಾದಂತಾಗಿದೆ.
ಮಹತ್ವದ ವೆಳವಣಿಗೆಯೊಂದರಲ್ಲಿ ಹೊಸ ಪಕ್ಷ ರಚಿಸುವ ನಿರ್ಧಾರ ಕೈಗೊಂಡಿರುವ ಶಿವಪಾಲ್, ಅದರ ಮುಖ್ಯಸ್ಥರನ್ನಾಗಿ ತಮ್ಮ ಸಹೋದರ ಮುಲಾಯಂರನ್ನು ನೇಮಕ ಮಾಡಲಿದ್ದಾರೆ.
ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಅಖಿಲೇಶ್ ಬಣದ ವಿರುದ್ಧ ಇತ್ತೀಚಿನ ದಿನಗಳಿಂದಲೂ ಧನಿ ಎತ್ತುತ್ತಲೇ ಇರುವ ಶಿವಪಾಲ್, ಎಸ್ಎಸ್ಎಂ ಒಂದೇ ವೇದಿಕೆಯಡಿ ಎಲ್ಲ ಸಮಾಜವಾದಿಗಳನ್ನು ಒಗ್ಗೂಡಿಸಲಿದೆ ಎಂದು ಪ್ರಕಟಿಸಿದ್ದಾರೆ. ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಅಖಿಲೇಶ್ ಅವರಿಗೆ ಈ ಬೆಳವಣಿಗೆ ಬಲವಾದ ಹೊಡೆತ ನೀಡಿದೆ.
< Eesanje News 24/7 ನ್ಯೂಸ್ ಆ್ಯಪ್ >