ಸರ್ಜಿಕಲ್ ಸ್ಟ್ರೈಕ್ಗೆ ಬಲಿಯಾದ ಸೈನಿಕರು, ಉಗ್ರರ ದೇಹಗಳನ್ನು ಆತುರಾತುರವಾಗಿ ಅಂತ್ಯಕ್ರೀಯೆ ಮಾಡಿದ ಪಾಕ್

ಇಸ್ಲಾಮಾಬಾದ್, ಅ.1– ಭಾರತ ಸರ್ಜಿಕಲ್ ಸ್ಟ್ರೈಕ್ಗೆ ಬಲಿಯಾದ ತನ್ನ ಸೈನಿಕರ ಮತ್ತು ಉಗ್ರರ ಮೃತದೇಹವನ್ನು ಪಾಕ್ ಸೇನೆ ಆತುರಾತುರವಾಗಿ ಅಂತಿಮ ಸಂಸ್ಕಾರ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಉಗ್ರರ ಮತ್ತು ಸೈನಿಕರ ಕಳೇಬರಗಳನ್ನು, ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಅವಸರವಸರವಾಗಿ ದಫನ ಮಾಡಿವೆ. ಭಾರತೀಯ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದ ಒಳಗಡೆ ನುಸುಳಿ 7 ಉಗ್ರರ ನೆಲೆಗಳ ಮೆಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 38 ಉಗ್ರರು ಹತ್ಯೆ ಯಾಗಿದ್ದಾರೆ ಎಂದು ಗುರುವಾರ ವರದಿಯಾಗಿದ್ದರೆ ಇಂದು 70ಕ್ಕೂ ಹೆಚ್ಚು ಉಗ್ರರು ಜೊತೆ 8 ಮಂದಿ ಪಾಕ್ ಸೈನಿಕರು ಈ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದಾರೆ ಎಂದು ವರದಿ ಯಾಗಿದೆ.
ದಾಳಿಯಲ್ಲಿ ಮೃತಪಟ್ಟ ಸೈನಿಕರ ಮೃತ ದೇಹಗಳನ್ನು ಈ ರೀತಿ ದಫನ ಮಾಡಿದ ಕಾರಣ ಆ ಯೋಧನ ಕುಟುಂಬಕ್ಕೆ ಏನಾಯಿತು ಎಂದು ತಿಳಿಯುವ ಅವಕಾಶ ಇಲ್ಲದಾಗಿದೆ. ಮೃತಪಟ್ಟ ಉಗ್ರರು ಜೈಷ್- ಮೊಹಮ್ಮದ್ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದವರಾಗಿದ್ದು ಭಾರತಕ್ಕೆ ನುಸುಳಿ ಮಹಾ ನಗರಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಇದೇ ವೇಳೆ ಪಾಕಿಸ್ತಾನ ಸರ್ಕಾರ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ಗೆ ಸ್ವಲ್ಪ ದಿನಗಳ ಕಾಲ ಬಾಯಿ ಮುಚ್ಚಿ ಸುಮ್ಮನಿದ್ದು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಸೂಚನೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
► Follow us on – Facebook / Twitter / Google+