ಸಾಹಿತ್ಯ ಸಮ್ಮೇಳನಕ್ಕೆ ಶಿಕ್ಷಕರಿಂದ ತಲಾ ನೂರು ರೂ. ದೇಣಿಗೆ
ಮುದ್ದೇಬಿಹಾಳ,ಫೆ.6- ಅನುದಾನಿತ, ಅನುದಾನ ರಹಿತ ಹಾಗೂ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರಿಂದ ತಲಾ ನೂರು ರೂ. ದೇಣಿಗೆಯನ್ನು ತಾಲೂಕಿನ ನಾಲತವಾಡದಲ್ಲಿ ನಡೆಯಲಿರುವ ಮೂರನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಂ. ಬೆಳಗಲ್ ತಿಳಿಸಿದ್ದಾರೆ. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಶನಿವಾರ ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮುದ್ದೇಬಿಹಾಳ ಹಾಗೂ ತಾಳಿಕೋಟಿಯಲ್ಲಿ ನಡೆದಿರುವ ತಾಲೂಕು ಸಮ್ಮೇಳನಗಳಿಗೆ ಎಷ್ಟು ಹಣ ದೇಣಿಗೆಯಾಗಿ ನೀಡಲಾಗಿದೆಯೋ ಅದರಷ್ಟು ಹಣ ನೀಡುವುದಕ್ಕೆ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಸಮ್ಮತಿಸಿದ್ದಾರೆ ಎಂದರು.
ಸಮ್ಮೇಳನ ಯಶಸ್ವಿಗೆ ಸಹಕಾರ ನೀಡುವಂತೆ ಕಸಾಪ ತಾಲೂಕಾಧ್ಯಕ್ಷ ಎಂ.ಬಿ. ನಾವದಗಿ ಮನವಿ ಮಾಡಿಕೊಂಡಿದ್ದು, ಕನ್ನಡ ನಾಡು, ನುಡಿಯನ್ನು ಬಿಂಬಿಸುವ ಸಾಹಿತ್ಯ ಸಮ್ಮೇಳನಗಳಿಗೆ ತನು, ಮನ, ಧನದ ಸಹಾಯ ನೀಡಿ ಯಶಸ್ವಿಗೆ ಶ್ರಮಿಸೋಣ ಎಂದು ಅವರು ಹೇಳಿದರು. ಸಭೆಯಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ, ಬಿಆರ್ಪಿ ಎಸ್.ಬಿ. ಸಜ್ಜನ, ಎಸ್.ಎಸ್. ನವಲಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ಬಾಣಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ ಹೂಗಾರ, ವಿವಿಧ ಸಂಘಗಳ ಸದಸ್ಯರಾದ ಎಸ್.ಟಿ. ಪಾಟೀಲ, ಎಸ್.ಎಸ್. ಹಿರೇಮಠ, ಎಂ.ಎಸ್. ಪಾಟೀಲ, ಮತ್ತಿತರರು ಇದ್ದರು.
< Eesanje News 24/7 ನ್ಯೂಸ್ ಆ್ಯಪ್ >