ಹುಷಾರು, ಬಿಲ್ ಕೇಳಲು ಹೋದರೆ ಮಂಚಕ್ಕೆ ಕರೀತಾನಂತೆ ಬಿಬಿಎಂಪಿ ಅಧಿಕಾರಿ..!
ಬೆಂಗಳೂರು,ಮಾ.1- ಶಾಸಕ ಮುನಿರತ್ನ ಕ್ಷೇತ್ರ ಆರ್.ಆರ್.ನಗರದಲ್ಲಿ ಲಂಚಾವತಾರದ ಜೊತೆಗೆ ಮಂಚಾವತಾರವೂ ಕೇಳಿಬಂದಿದೆ. ಓಎಫ್ಸಿ ಕೇಬಲ್ ಅಳವಡಿಕೆಗೆ ಲಂಚ ಕೇಳಿದ ಬಿಬಿಎಂಪಿ ಅಧಿಕಾರಿಗಳು ಒಂಟಿ ಮನೆ ನಿರ್ಮಾಣದ ಬಿಲ್ ಕೇಳಿದ ಮಹಿಳೆಯನ್ನು ಮಂಚಕ್ಕೆ ಆಹ್ವಾನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಲಗ್ಗೆರೆ ವಾರ್ಡ್ನಲ್ಲಿ ಒಂಟಿ ಮನೆ ನಿರ್ಮಾಣ ಸಂಬಂಧ ಬಿಲ್ ಕೇಳಲು ಹೋದ ಮಹಿಳೆಯೊಬ್ಬರಿಗೆ ಲಂಚ ಕೇಳಿರುವುದರ ಜೊತೆಗೆ ಅಧಿಕಾರಿಗಳು ಮಂಚಕ್ಕೂ ಕರೆದಿರುವ ಅತ್ಯಂತ ನಾಚಿಕೆಗೇಡಿನ ಹಾಗೂ ತಲೆತಗ್ಗಿಸುವ ಸಂಗತಿ ದಾಖಲೆ ಸಮೇತ ಬಹಿರಂಗವಾಗಿದೆ.
ಒಂಟಿ ಮನೆ ನಿರ್ಮಾಣ ಸಂಬಂಧ ಬಿಲ್ ಕೇಳಲು ಹೋದ ಮಹಿಳೆಯೊಬ್ಬರಿಗೆ ಲಂಚ ಕೇಳಿರುವುದಲ್ಲದೆ ಮಂಚಕ್ಕೂ ಆಹ್ವಾನಿಸಿರುವ ಮಹಾನ್ ವ್ಯಕ್ತಿ ಕೇಸ್ವರ್ಕರ್ ಚಂದ್ರು. ಅಲ್ಲದೆ ಈ ವಾರ್ಡ್ನಲ್ಲಿ ಓಎಫ್ಸಿ ಅಳವಡಿಕೆ ಸಂಬಂಧ ಕಾರ್ಪೊರೇಟರ್ ಹೆಸರಿನಲ್ಲಿ ಎತ್ತುವಳಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದವರು ಸ್ಥಳೀಯ ಕಾರ್ಪೊರೇಟರ್ ಮಂಜುಳಾ ನಾರಾಯಣಸ್ವಾಮಿಯವರು.
ಇವರು ಇಂದು ಪತ್ರಿಕಾಗೋಷ್ಠಿ ನಡೆಸಿ ಕೇಸ್ವರ್ಕರ್ ಚಂದ್ರು ಅವರು ಒಂಟಿ ಮನೆ ನಿರ್ಮಾಣ ಸಂಬಂಧ ಮಹಿಳೆಯೊಬ್ಬರಿಂದ ಲಂಚ ಕೇಳಿದ ಬಗ್ಗೆ ಮತ್ತು ಮಂಚಕ್ಕೆ ಕರೆದ ಬಗ್ಗೆ ಆಡಿಯೋ ಸಂಬಂಧಿತ ಸಿಡಿ ಬಿಡುಗಡೆ ಮಾಡಿದರು. ಆರ್.ಆರ್.ನಗರದಲ್ಲಿ ಅಧಿಕಾರಿಗಳು ಕೊಳ್ಳೆ ಹೊಡೆಯಲು ನಿಂತಿದ್ದಾರೆ. ಕೇಸ್ ವರ್ಕರ್ ಚಂದ್ರು, ಎಇಇ ಬಸವರಾಜ್, ಎಇ ಅಶ್ವಥ್ ಇವರು ಶಾಸಕ ಮುನಿರತ್ನ ಅವರ ಕುಮ್ಮಕ್ಕಿನಿಂದ ಓಎ-ಸಿ ಕೇಬಲ್ ಅಳವಡಿಸಲು ಲಕ್ಷ ಗಟ್ಟಲೇ ಹಣ ಪೀಕುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕರು ಅಧಿಕಾರಿಗಳ ಮೂಲಕ ಮಹಿಳಾ ಪಾಲಿಕೆ ಸದಸ್ಯರ ಮೇಲೆ ದೌರ್ಜನ್ಯ ವೆಸಗುತ್ತಿದ್ದಾರೆ. ಅಧಿಕಾರಿಗಳು ಆರ್ಆರ್ನಗರ ಕ್ಷೇತ್ರದಲ್ಲಿ ರಾಜಾರೋಷವಾಗಿ ಲಂಚ ಸ್ವೀಕರಿಸುತ್ತಿದ್ದಾರೆ. ಕೇಸ್ ವರ್ಕರ್ ಚಂದ್ರು ಎಂಬಾತನಿಂದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳವಾಗಿದೆ. ಈ ಬಗ್ಗೆ ಪೊಲೀಸರಿಗೆ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.
ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ ಆಡಿಯೋ ಲಭ್ಯವಾಗಿದೆ. ಅಧಿಕಾರಿಗಳು ಲಂಚ ಸ್ವೀಕರಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದರು. ಆರ್ಆರ್ನಗರ ವಲಯಕ್ಕೆ ನಮ್ಮ ವಾರ್ಡ್ನ ಫೈಲ್ಗಳು ಬಂದರೆ ಯಾವ ಕೆಲಸಗಳು ಆಗುವುದಿಲ್ಲ. ಅಧಿಕಾರಿಗಳು ಕಾರ್ಪೊರೇಟರ್ ನಂಬರ್ನ್ನೇ ಬ್ಲಾಕ್ ಮಾಡಿಕೊಂಡಿದ್ದಾರೆ. ಜಂಟಿ ಆಯುಕ್ತರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮಂಜುಳಾ ನಾರಾಯಣಸ್ವಾಮಿ ಆರೋಪಿಸಿದರು.