ವಾರಣಾಸಿ, ಜ. 10- ವಿಶ್ವ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಣಬಿ(ಜೂಟ್)ನಿಂದ ತಯಾರಿಸಿದ 100 ಜೋಡಿ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇತ್ತೀಚೆಗೆ ವಾರಣಾಸಿಯಲ್ಲಿ ಹಲವು ಕಾಮಗಾರಿಗಳನ್ನು ಉದ್ಘಾಟಿಸಿದ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ಸನ್ನಿಧಾನಕ್ಕೆ ಭೇಟಿ ನೀಡಿಗ ವೇಳೆಯಲ್ಲಿ ಅನೇಕ ಕಾರ್ಮಿಕರು ಬರೀ ಕಾಲಲ್ಲೇ ದೇಗುಲದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಕಾರ್ಯದಲ್ಲಿ ತೊಡಗಿದ್ದನ್ನು ಗಮನಿಸಿದ್ದರು.
ಕಾಶಿ ದೇಗುಲದಲ್ಲಿ ಕೆಲಸ ನಿರ್ವಹಿಸುವವರು ದೇಗುಲದ ಒಳಗೆ ಲೆದರ್ ಅಥವಾ ರಬ್ಬರ್ನಿಂದ ತಯಾರಿಸಿದ ಪಾದರಕ್ಷೆಯನ್ನು ಧರಿಸಬಾರದು ಎಂಬುದನ್ನು ತಿಳಿದ ತಕ್ಷಣ ಪ್ರಧಾನಿ ನರೇಂದ್ರಮೋದಿಯವರು ಕಾರ್ಮಿಕರಿಗಾಗಿ 100 ಜೋಡಿಯ ಸೆಣಬಿನ ಪಾದರಕ್ಷೆಯನ್ನು ಉಡುಗೊರೆಯಾಗಿ ಕಳಿಸಿದ್ದಾರೆ.
ಚಳಿಗಾಲದಲ್ಲಿ ಬರೀ ಪಾದದಲ್ಲಿ ಕಾರ್ಮಿಕರಿಗೆ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯವಾಗಿರುತ್ತದೆ ಆದ್ದರಿಂದಲೇ ಪ್ರಧಾನಿ ಅವರು ಕಾರ್ಮಿಕರ ಮೇಲಿನ ಪ್ರೀತಿಯನ್ನು ತೋರ್ಪಡಿಸುವ ಸಲುವಾಗಿ ಸೆಣಬಿನಿಂದ ತಯಾರಿಸಿದ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪ್ರಧಾನಿ ಸೆಣಬಿನಿಂದ ತಯಾರಿಸಿದ 100 ಜೋಡಿಯ ಪಾದರಕ್ಷೆಗಳನ್ನು ಕಳುಹಿಸುವುದನ್ನು ನೋಡಿದರೆ ಅವರಿಗೆ ಬಡವರು ಹಾಗೂ ಕಾರ್ಮಿಕರ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ ಎಂದು ದೇಗುಲದ ಮಂಡಳಿಯವರು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ವಾರಣಾಸಿಯ ಕಾಶಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾಗ ದೇಗುಲದ ಸ್ವಚ್ಛತೆಯಲ್ಲಿ ತೊಡಗಿರುವ ಕಾರ್ಮಿಕರ ಸೇವೆಯನ್ನು ಗುರುತಿಸಿ ಅವರ ಮೇಲೆ ಪುಷ್ಪವೃಷ್ಟಿ ಸುರಿಸಿದ್ದರಲ್ಲದೆ ಅವರೊಂದಿಗೆ ಭೋಜನವನ್ನು ಸೆವಿಸಿದ್ದರು.
