ನವದೆಹಲಿ,ಫೆ.1 ಭಾರತದ 5 ರಾಜ್ಯಗಳಲ್ಲಿ ಹೊಸದಾಗಿ 16 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಘೋಷಿಸಿದ್ದಾರೆ. ಪ್ರಧಾನಮಂತ್ರಿ ಗತಿ ಶಕ್ತಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದ ರೇವಾ, ಛತ್ತೀಸ್ಗಢದ ಅಂಬಿಕಾಪುರ, ಬಿಲಾಸ್ಪುರ ಮತ್ತು ಜಗದಲ್ಪುರದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಿದ್ದೇವೆ.
ಉತ್ತರ ಪ್ರದೇಶದಲ್ಲಿ 9, ರಾಜಸ್ಥಾನದಲ್ಲಿ 1 ವಿಮಾನ ನಿಲ್ದಾಣ ಹಾಗೂ ಮಹಾರಾಷ್ಟ್ರದಲ್ಲಿ 2 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಪ್ರಧಾನಿ ನರೇಂದ್ರಮೋದಿ ಅವರು ಕಳೆದ ವರ್ಷ ಆಗಸ್ಟ್ 15 ರಂದು ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪ್ರಾರಂಭಿಸಿದರು. ಸಮಗ್ರ ಯೋಜನೆ ಮತ್ತು ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಂಘಟಿತ ಅನುಷ್ಠಾನದ ಮೂಲಕ ಬಹು-ಮಾದರಿ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.
ಪಿಎಂ ಗತಿ ಶಕ್ತಿ ಯೋಜನೆಯಿಂದ ಇಂದು ದೇಶದಲ್ಲಿ ಬಹು ಮಾದರಿ ಸಂಪರ್ಕಕ್ಕೆ ವೇಗ ದೊರಕಿದೆ. ದೇಶದಲ್ಲಿ ಹೆಚ್ಚಿನ ಹೂಡಿಕೆಯನ್ನು ತರಲು ಹಾಗೂ ಉತ್ತಮ ಉದ್ಯೋಗವನ್ನು ಸೃಷ್ಟಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇದು ಯುಎಸ್ಡಿ 5 ಟ್ರಿಲಿಯನ್ ಆರ್ಥಿಕತೆಯ ದೃಷ್ಟಿಯನ್ನು ಸಾಕಾರಗೊಳಿಸುತ್ತದೆ. ದಕ್ಷಿಣ ಏಷ್ಯಾದ ದೇಶಗಳು ಸೇರಿದಂತೆ ವಿಶ್ವದ ಹಲವು ದೇಶಗಳು ಕಳೆದ 70 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯತ್ತ ಗಮನಹರಿಸಿವೆ. ಇದೀಗ ಆ ಎಲ್ಲಾ ದೇಶಗಳು ಅಭಿವೃದ್ಧಿ ಹೊಂದಿದ ದೇಶಗಳಾಗಿ ಹೊರಹೊಮ್ಮಿವೆ ಎಂದು ಸಿಂಯಾ ತಿಳಿಸಿದರು.
