ತಿರುವನಂತಪುರ,ಮಾ.8-ಮನೆಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡಕ್ಕೆ ಮಗು ಸೇರಿದಂತೆ ಐವರು ಸಜೀವವಾಗಿ ದಹನವಾಗಿರುವ ಘಟನೆ ಕೇರಳದ ದವಳಪುರಂನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೃತರನ್ನು ಪ್ರತಾಪನ್(64) ಅವರ ಪತ್ನಿ ಶೆರ್ಲಿ(53), ಕಿರಿಯ ಮಗ ಅಖಿಲ್(25), ಹಿರಿಯ ಮಗನ ಪತ್ನಿ ಅರಾಮಿ(24) ಮತ್ತು 8 ತಿಂಗಳ ಮೊಮ್ಮಗ ರಾಯನ್ ಎಂದು ಗುರುತಿಸಲಾಗಿದೆ.
ನಿಖಿಲ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರ್ಕಳ ಸಮೀಪದ ಚಿರಿಯನ್ನೂರಿನ ದವಳಪುರಂನಲ್ಲಿ ಪ್ರತಾಪನ್ ಸೇರಿದ ಮನೆಯಲ್ಲಿ ರಾತ್ರಿ 1.45ರ ವೇಳೆಗೆ ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆಗೆ ಮನೆಯ ಹೊರಗೆ ನಿಲ್ಲಿಸಿದ್ದ ಐದು ಬೈಕ್ಗಳು ಕೂಡ ಸುಟ್ಟು ಕರಕಲಾಗಿವೆ.
ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ನೆರೆಹೊರೆಯವರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವಷ್ಟರಲ್ಲಿಯೇ ಬೆಂಕಿ ಮನೆಯನ್ನು ಸಂಪೂರ್ಣವಾಗಿ ಆವರಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ಸಕ್ರ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸರಬಹುದು ಎನ್ನಲಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
