50 ವರ್ಷ ಮೇಲ್ಪಟ್ಟ 10,000 ಸಾರಿಗೆ ನೌಕರರಿಗೆ ಕಡ್ಡಾಯ ರಜೆ
ಬೆಂಗಳೂರು,ಜು.1-ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 50 ವರ್ಷ ಮೇಲ್ಪಟ್ಟ 10,000 ಸಾರಿಗೆ ನೌಕರರಿಗೆ ಕಡ್ಡಾಯ ರಜೆ ನೀಡಲಾಗಿದೆ.
ಪೊಲೀಸ್ ಇಲಾಖೆಯಲ್ಲಿ 50 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಕಡ್ಡಾಯ ರಜೆ ನೀಡಿದಂತೆ ಸಾರಿಗೆ ಇಲಾಖೆಯ 4 ವಿಭಾಗಗಳಲ್ಲೂ 10 ಸಾವಿರ ನೌಕರರಿಗೆ ರಜೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಅಧಿಕಾರಿಗಳಿಂದ ಹಿಡಿದು ಕೆಳಹಂತದವರೆಗೂ 4 ವಿಭಾಗಗಳಾದ ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ರಜೆಯಲ್ಲಿರುವಂತೆ ಸೂಚನೆ ಕೊಡಲಾಗಿದೆ.
50 ವರ್ಷ ಮೇಲ್ಪಟ್ಟವರಲ್ಲಿ ಕೊರೊನಾ ಸೋಂಕು ದೃಢಪಟ್ಟರೆ ಅಂಥವರು ಚೇತರಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಇರುವ ಸಿಬ್ಬಂದಿಯೇ ಸಂಸ್ಥೆಯನ್ನು ಮುನ್ನೆಡೆಸಿಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ.
ಜೊತೆಗೆ ಲಾಕ್ಡೌನ್ ಸಡಿಲಿಕೆಯಾದ ನಂತರ ಸಾರಿಗೆ ಸಂಚಾರವನ್ನು ಆರಂಭಿಸಿದರೂ ಪ್ರಯಾಣಿಕರಿಂದ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಬರುತ್ತಿಲ್ಲ. ಬಸ್ನಲ್ಲಿ ಸಂಚರಿಸಿದರೆ ಸೋಂಕು ಹಬ್ಬಬಹುದೆಂಬ ಭೀತಿಯಿಂದಾಗಿ ಜನರು ಬಸ್ನಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.
ಪ್ರಾರಂಭದ ಮೊದಲೆರಡು ವಾರದಲ್ಲಿ ಒಂದಿಷ್ಟು ಉತ್ತಮ ಪ್ರತಿಕ್ರಿಯೆ ಕಂಡುಬಂದಿತ್ತು. ಆದರೆ ಯಾವಾಗ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣ ಶರವೇಗದಲ್ಲಿ ಏರಿಕೆಯಾಯಿತೊ ಪ್ರಯಾಣಿಕರು ಬಸ್ ಹತ್ತುವುದಕ್ಕೆ ಹೆದರುತ್ತಿದ್ದಾರೆ.
ಹೀಗಾಗಿ ಬಸ್ಗಳ ಮೇಲೆ ಅವಲಂಬಿತರಾಗಿದ್ದ ಪ್ರಯಾಣಿಕರು ಇದೀಗ ತಮ್ಮ ಸ್ವಂತ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ಸಂಸ್ಥೆಗೆ ಆದಾಯ ಇಲ್ಲದೆ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಿಬ್ಬಂದಿಯನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿತ್ತು.
ಇದೀಗ 50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ರಜೆ ನೀಡುತ್ತಿರುವುದಕ್ಕೆ ಇದು ಕೂಡ ಕಾರಣವಿರಬಹುದು ಎನ್ನಲಾಗುತ್ತಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯಿಂದ ಸಂಸ್ಥೆಗೆ ನಿರೀಕ್ಷಿತ ಪ್ರಮಾಣದ ಲಾಭ ಸಿಗುತ್ತಿಲ್ಲ. ಸ್ವತಃ ಸಾರಿಗೆ ಸಚಿವರೇ ತಡೆ ಹಿಡಿದಿದ್ದ 200 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರು.
ಒಂದು ಹಂತದಲ್ಲಿ ಸಿಬ್ಬಂದಿಗಳಿಗೆ ವೇತನವನ್ನೇ ಕೊಟ್ಟಿರಲಿಲ್ಲ. ಇದೀಗ ಕೊರೊನಾ ಸೋಂಕು ಇಳಿಮುಖವಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಕೆಲವು ಸಿಬ್ಬಂದಿಗೆ ಕಡ್ಡಾಯ ರಜೆ ತೆಗೆದುಕೊಳ್ಳಲು ಸೂಚಿಸಲಾಗಿದೆ.