ಬೆಂಗಳೂರು,ಫೆ.3-ಕಿಚ್ಚ ಸುದೀಪ್ ಕಾಂಗ್ರೆಸ್ ಸೇರುವ ಬಗ್ಗೆ ವದಂತಿಗಳು ತೀವ್ರಗೊಂಡಿದ್ದು, ಬಹುತೇಕ ನಾಯಕರು ಸ್ವಾಗತಿಸಿದ್ದಾರೆ. ಸುದೀಪ್ ಅವರು ಕಾಂಗ್ರೆಸ್ ಪರವಾದ ಒಲವು ಹೊಂದಿದ್ದಾರೆ. ಅವರೊಂದಿಗೆ ಈಗಾಗಲೇ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಚರ್ಚೆ ನಡೆಸಿ ಆಹ್ವಾನ ನೀಡಿದ್ದಾರೆ.
ಇದರ ಬೆನ್ನಲ್ಲೇ ಸುದೀಪ್ ಮತ್ತು ಡಿ.ಕೆ.ಶಿವಕುಮಾರ್ ಅವರು ರಹಸ್ಯ ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸುದೀಪ್ ಚಿತ್ರದುರ್ಗ ಅಥವಾ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಸುದೀಪ್ ಅವರನ್ನು ಪಕ್ಷಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ.
ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?
ಈ ಕುರಿತು ನಗರದಲ್ಲಿಂದು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸುದೀಪ್ ಕಾಂಗ್ರೆಸ್ಗೆ ಬರುವುದಾಗಿ ಸ್ವಾಗತಿಸುವುದಾಗಿ ಹೇಳಿದ್ದಾರೆ.
ಬಹುತೇಕವಾಗಿ ಚಿತ್ರನಟರು ರಾಜಕೀಯ ಸೇರುವಾಗ ಹಿಂದೆ-ಮುಂದೆ ನೋಡುತ್ತಾರೆ. ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಚಿತ್ರನಟರ ರಾಜಕೀಯ ಭವಿಷ್ಯ ಯಶಸ್ವಿಗೊಂಡಿದೆ. ಆದರೆ, ಕರ್ನಾಟಕದಲ್ಲಿ ಅಂತಹ ಬೆಳವಣಿಗೆಗಳಿಲ್ಲ. ಆದಾಗ್ಯೂ ಸುದೀಪ್ ಅವರು ಪಕ್ಷಕ್ಕೆ ಬರುವುದನ್ನು ತಾವು ಸ್ವಾಗತಿಸುವುದಾಗಿ ಹೇಳಿದ್ದಾರೆ.
Actor, Kiccha Sudeep, meets, DK Shiva Kumar, Politics Entry,