ಬೆಂಗಳೂರು,ಜ.23- ರಾಜ್ಯದಲ್ಲಿ 2013ರಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದೇ ಎಐಸಿಸಿ ಪಾಲಿಗೆ ಎಟಿಎಂ ಆಗಲು. ಇಳಿಜಾರಿನಲ್ಲಿ ಕಾಲಿಟ್ಟ ಪಕ್ಷಕ್ಕೆ ಅಹರ್ನಿಶಿ ಸಂಪನ್ಮೂಲ ಒದಗಿಸುತ್ತಿದ್ದ ಹೈ ಕಮಾಂಡ್ 1000 ಕೋಟಿ ರೂ. ಕಳುಹಿಸಿದ ಬಗ್ಗೆ ಗೋವಿಂದರಾಜು ಆಪ್ತರ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸಾಕ್ಷಿಯಿದೆ ಎಂದು ಬಿಜೆಪಿ ಹೊಸ ಬಾಂಬ್ ಸಿಡಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರ ಮೇಲಿನ ಜವಾಬ್ದಾರಿ ಎಷ್ಟಿತ್ತು ಎಂಬುದನ್ನು ಅವರ ಕಾಲದಲ್ಲಿ ನಡೆದ ವಿವಿಧ ಬಹುಕೋಟಿ ಹಗರಣಗಳು ಸ್ಪಷ್ಟಪಡಿಸುತ್ತವೆ. ಪುನರ್ಪರಿಶೀಲನೆ ಮಾಡಿ ಎಂದು ಕೋರ್ಟ್ ಹೇಳಿದ ರೀಡೂವನ್ನೇ ಹಿಡಿದು ಅರ್ಕಾವತಿ ಅಕ್ರಮ ಡೀನೋಟಿಫಿಕೇಶನ್ನಲ್ಲಿ ಸಾವಿರಕ್ಕೂ ಹೆಚ್ಚು ಕೋಟಿ ರೂ. ಹಗರಣ ನಡೆಸಿದಿರಿ ಎಂದು ಆರೋಪಿಸಿದೆ.
ಕಸದಿಂದಲೂ ಕೋಟಿ ಕೋಟಿ ಲೂಟಿ ಮಾಡಿದ ಕೀರ್ತಿ ಸಮಾಜವಾದಿ ಕಾಂಗ್ರೆಸ್ಸಿನವರದ್ದು. 2015-16ರಲ್ಲಿ ಕಸ ವಿಲೇವಾರಿಗೆ ಮಾಡಿದ್ದ 385 ಕೋಟಿ ರೂ. 2016-17ಕ್ಕೆ ಆಗುವಾಗ 1066 ಕೋಟಿ ರೂ. ಆದದ್ದು ತಮ್ಮ ಹಾಗೂ ಕೆ.ಜೆ. ಜಾರ್ಜ್ ಕೈ ಚಳಕದ ಪರಿಣಾಮವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದೆ.
ಪುರಿಜಗನ್ನಾಥನ ದರ್ಶನ ಪಡೆದ ಪಾಕಿಸ್ತಾನದ 45 ಹಿಂದೂ ಭಕ್ತರು
ಕಾಲ ಕಳೆದಂತೆ ಜನ ಹಳೆಯ ವಿಚಾರಗಳನ್ನು ಮರೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಭಾವಿಸಿದ್ದಾರೆ. ತಾನು ವ್ಯವಹಾರವೇ ನಡೆಸಬಾರದಾ ಎಂದು ಮುಗ್ದ ವ್ಯಾಪಾರಿಯಂತೆ ಪ್ರಶ್ನಿಸುವ ಅವರು, 2017ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ 8.86 ಕೋಟಿ ನಗದು ನಳನಳಿಸುತ್ತಿದ್ದುದು ಹೇಗೆ ಎಂದು ಇನ್ನೂ ತಿಳಿಸಿಲ್ಲ ಎಂದು ವ್ಯಂಗ್ಯವಾಡಿದೆ.
ಸೌರ ವಿದ್ಯುತ್ ಹೆಸರಲ್ಲಿ ಡಿ.ಕೆ.ಶಿವಕುಮಾರ್ ತಂತ್ರಜ್ಞಾನವನ್ನೇ ಮೀರಿಸುವಂತೆ ಭ್ರಷ್ಟಾಚಾರ ನಡೆಸಿದ್ದರು. ಸದಾ ಸರ್ವರ್ ಬಿಜಿ ಇರಿಸಿ ತಮಗೆ ಬೇಕಾದ ಆಯ್ದ ವ್ಯಕ್ತಿಗಳ ಜತೆ ವ್ಯವಹಾರ ಕುದುರಿಸಿದ ಮೇಲೆ ಏಳೇ ನಿಮಿಷಗಳಲ್ಲಿ ಕೋಟ್ಯಂಟರ ರೂ. ಟೆಂಡರ್ ಪ್ರಕ್ರಿಯೆ ಮುಗಿಸಿದ ಕೀರ್ತಿ ಅವರದ್ದು ಎಂದು ಟೀಕೆ ಮಾಡಿದೆ.
ಆ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಾಯಿ ಹಾಗೂ ಸಹೋದರನ ಹೆಸರಲ್ಲೂ ಟೆಂಡರ್ ಮಾಡಿಸಿದ ಡಿ.ಕೆ.ಶಿವಕುಮಾರ್, ಬೇನಾಮಿ ವ್ಯವಹಾರದ ಎಕ್ಸ್ಪರ್ಟ್. ಈಗಲೂ ತಾವು ಇಡಿ ಕರೆದಾಗ ಪಿಕ್ನಿಕ್ ರೀತಿ ಹೋಗಿ ಮಾಧ್ಯಮಗಳ ಮುಂದೆ ಅವಲತ್ತುಕೊಳ್ಳುತ್ತಾರೆಯೇ ವಿನಃ ಆರೋಪ ಅಲ್ಲಗಳೆಯುವ ಯಾವುದೇ ಸಾಕ್ಷ್ಯ ಒದಗಿಸಿಲ್ಲ ಎಂದು ಆರೋಪಿಸಿದೆ.
10 ಜನರನ್ನು ಕೊಂದ ಹಂತಕ 72 ವರ್ಷದ ವೃದ್ಧ..!
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಡೆಸುವ ಹಾಸ್ಟೆಲ್ಗಳಿಗೆ ಹಾಸಿಗೆ-ದಿಂಬು ಖರೀದಿಯಲ್ಲೂ ಕಾಂಗ್ರೆಸ್ ಸರ್ಕಾರ ನೋಡಿದ್ದು ಹಣ ಕಬಳಿಸುವ ದಾರಿಯನ್ನೇ. 14 ಕೋಟಿ ರೂ. ಆ ರೀತಿ ನುಂಗಿದರೆ ಆಹಾರ ಪೂರೈಕೆ ಗುತ್ತಿಗೆಗೆ ಎಚ್.ಆಂಜನೇಯ ಪತ್ನಿ 7 ಲಕ್ಷ ರೂ. ಲಂಚಕ್ಕೆ ಕೈ ಒಡ್ಡಿ ವೀಡಿಯೋ ಸಹಿತ ಸಿಕ್ಕುಬಿದ್ದರು ಎಂದು ಕಿಡಿಕಾರಿದೆ.
ಇವು ಕೇವಲ ಸ್ಯಾಂಪಲ್ಗಳು. ಇಂಥ ಘನಂದಾರಿ ಕೆಲಸ ಮಾಡಿದ ಕಾಂಗ್ರೆಸ್ ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಯಾವ ನೈತಿಕತೆಯೂ ಉಳಿದಿಲ್ಲದ ಕೈ ನಾಯಕರು ಆಡುವ ಮಾತಿಗೆ ಆಧಾರಗಳೂ ಕೊಡುತ್ತಿಲ್ಲ. ಸುಳ್ಳನ್ನೇ ನೂರು ಬಾರಿ ಗಟ್ಟಿಯಾಗಿ ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುವ ಹಳೇ ಸೂತ್ರದಲ್ಲೇ ಇದ್ದಾರೆ ಎಂದು ಆಕ್ರೋಶ ವಕ್ತಪಡಿಸಿದೆ.
AICC, Karnataka, Congress, ATM, BJP,