ಕಾಶ್ಮೀರ,ಜು.22-ಕೆಟ್ಟ ಹವಾಮಾನ ಹಾಗೂ ರಸ್ತೆ ಅನಾನುಕೂಲಗಳಿಂದಾಗಿ ಅಮರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಂಬಾನ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಭೂಕುಸಿತವಾಗಿ ಕಲ್ಲುಗಳು ರಸ್ತೆಗೆ ಅಡ್ಡಲಾಗಿದ್ದವು. ಅವುಗಳನ್ನು ತೆರವುಗೊಳಿಸಿ ನಿನ್ನೆ ಮಧ್ಯರಾತ್ರಿ ಏಕಮುಖ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.
ಆದರೆ, ಕೆಟ್ಟ ಪರಿಸ್ಥಿತಿ ಮತ್ತು ಹವಾಮಾನ ಏರಿಳಿತದಿಂದಾಗಿ ಬೇಸ್ ಕ್ಯಾಂಪ್ನಿಂದ 3880 ಮೀಟರ್ ಎತ್ತರದಲ್ಲಿರುವ ಪವಿತ್ರ ಗುಹೆಯ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ.
ಹೊಸದಾಗಿ ಯಾವುದೇ ತಂಡಗಳ ಪ್ರಯಾಣಕ್ಕೆ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದ ಉಂಟಾದ ನೆರೆ ಪರಿಸ್ಥಿತಿಯಿಂದಾಗಿ ಈ ಮೊದಲು ಜುಲೈ 10 ಮತ್ತು 11 ರಂದು ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಲಾಗಿತ್ತು.
ಎರಡು ದಿನಗಳ ಬಳಿಕ ಯಾತರೆ ಪುನರಾರಂಭಗೊಂಡಿತ್ತಾದರೂ ಈಗ ಮತ್ತೆ ಸ್ಥಗಿತಗೊಳಿಸಲಾಗಿದೆ. ಹೆದ್ದಾರಿ ಸಂಚಾರ ಪೂರ್ಣ ಪ್ರಮಾಣದಲ್ಲಿ ಶುರುವಾದ ಬಳಿಕ ಯಾತ್ರೆಗೆ ಅವಕಾಶ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 30ರಿಂದ ಆರಂಭಗೊಂಡಿರುವ ಈ ಯಾತ್ರೆ ಲಕ್ಷಾಂತರ ಜನ ಆಗಮಿಸಿದ್ದಾರೆ. ಈವರೆಗೂ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ಪವಿತ್ರ ಗುಹೆಯ ದರ್ಶನ ಪಡೆದಿದ್ದಾರೆ. ಆಗಸ್ಟ್ 11ರವರೆಗೂ ಯಾತ್ರೆಗೆ ಅವಕಾಶವಿದೆ.