ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದ ಸರ್ಕಾರ

Social Share

ಬೆಂಗಳೂರು,ಜ.31- ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಪ್ರಮುಖ ಬೇಡಿಕೆಗಳಲ್ಲಿ ಒಂದನ್ನು ಈಡೇರಿಸಿ ಆದೇಶ ಹೊರಡಿಸಿದೆ. ಇನ್ನು ಮುಂದೆ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳು ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ಮಾತ್ರ ಕಾರ್ಯ ನಿರ್ವಹಿಸುವಂತೆ ಹೊಸದಾಗಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈವರೆಗೂ ಅಂಗನವಾಡಿ ಕೇಂದ್ರಗಳು ಬೆಳಗ್ಗೆ 10ರಿಂದ 2 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ಸರ್ಕಾರ ಸಮಯವನ್ನು ಮಾರ್ಪಾಟ್ಟು ಮಾಡಿ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ರಾಜ್ಯದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ 2011ರಲ್ಲಿ ಎಲ್ಲ ಅಂಗನವಾಡಿ ಶಾಲೆಗಳನ್ನು ಬೆಳಗ್ಗೆ 9.30ರಿಂದ ಸಂಜೆ 4 ಗಂಟೆವರೆಗೆ ತೆರೆದು ಶಿಕ್ಷಣ ನೀಡುವಂತೆ ಸರ್ಕಾರ ಆದೇಶಿತ್ತು. ಆದರೆ ಈಗ ಅಂಗನವಾಡಿ ಶಾಲೆಗಳಲ್ಲಿ ದೀರ್ಘಾವ ಕೆಲಸ ಮಾಡುತ್ತಿದ್ದರೂ ನಮಗೆ ಗೌರವಧನ ತೀವ್ರ ಕಡಿಮೆಯಾಗಿದೆ. ಹೀಗಾಗಿ ಗೌರವಧನ ಹೆಚ್ಚಳ ಮಾಡುವಂತೆ ಪಟ್ಟು ಹಿಡಿದಿದ್ದರು.

ಈಗ ವೇತನ ಹೆಚ್ಚಳ ಮಾಡಲಾರದೇ ಸರ್ಕಾರ ಅಂಗನವಾಡಿ ಕೇಂದ್ರಗಳ ಸಮಯವನ್ನೇ ಬದಲಿಸಿ ಇನ್ನುಮುಂದೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ 1 ಗಂಟೆವರೆಗೆ ಮಾತ್ರ ಶಾಲಾ ಪೂರ್ವ ಶಿಕ್ಷಣ ನೀಡುವಂತೆ ಸರ್ಕಾರ ಸೂಚಿಸಿದೆ.

ಅಂಗನವಾಡಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಇತರೆ ಯೋಜನೆಗಳ ಕಾರ್ಯಗಳನ್ನು ಮಾಡಲು ನೀಡುತ್ತಿದ್ದು, ಶಿಕ್ಷಣ ನೀಡಲು ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ನೀಡುವ ಸಮಯವನ್ನು ಮಾತ್ರ ಈಗ ಕಡಿತ ಮಾಡಲಾಗಿದೆ.

ಇನ್ನು ಬೆಳಗ್ಗೆ 10ರಿಂದ 1 ಗಂಟೆವರೆಗೆ ಅವಯ ಶಿಕ್ಷಣದ ಸಮಯದಲ್ಲಿ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವಂತಿಲ್ಲ. ಇನ್ನು ಅಂಗನವಾಡಿಯಲ್ಲಿ ಯಾವುದೇ ಕೆಲಸಗಳು ಇದ್ದರೂ ಅದನ್ನು ಮಧ್ಯಾಹ್ನ 2 ಗಂಟೆಯ ನಂತರ ಭೇಟಿ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ.

ಸಿಎಂ ಮನೆಗೆ ಮುತ್ತಿಗೆ:
ಇತ್ತ ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳಲ್ಲಿ ಒಂದನ್ನು ಸರ್ಕಾರ ಈಡೇರಿಸಿದ್ದರೂ ಹೋರಾಟದಿಂದ ಹಿಂದೆ ಸರಿಯದೆ ಬುಧವಾರದಿಂದ ಸಿಎಂ ಮನೆಗೆ ಮುತ್ತಿಗೆ ಹಾಕಲು ಕಾರ್ಯಕರ್ತೆಯರು ತೀರ್ಮಾನಿಸಿದ್ದಾರೆ.

ಕಳೆದ 9 ದಿನಗಳಿಂದ ಫ್ರೀಡಂಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಾವಿರಾರು ಸಂಖ್ಯೆಯ ಅಂಗನವಾಡಿ ಕಾರ್ಯಕರ್ತೆಯರು ಇದೀಗ ಸಿಎಂ ಬೊಮ್ಮಾಯಿ ಅವರ ರೇಸ್ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಮತ್ತು ಆರ್ಟಿನಗರದ ಖಾಸಗಿ ನಿವಾಸಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಜೊತೆ ಸಭೆ ಕರಿಯಬೇಕು. ಇಲ್ಲದಿದ್ದರೆ ನಾಳೆ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಲಾಗುತ್ತದೆ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮೀ ತಿಳಿಸಿದ್ದಾರೆ.

ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ 10 ದಿನ ಗಡುವು ನೀಡಿದ್ದೆವು. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸಲು ಸಮಯಾವಕಾಶ ಸಿಕ್ಕಿಲ್ಲ. ಇದೀಗ ಅಂತಿಮವಾಗಿ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿದ್ದೇವೆ. ಒಂದು ವೇಳೆ ಬೇಡಿಕೆಗಳನ್ನು ಈಡೇರಿಸುವ ಆದೇಶ ನೀಡದಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಕರೆ ನೀಡಿದ್ದಾರೆ.

ಬೇಡಿಕೆಗಳ ಬಗ್ಗೆ ಚರ್ಚಿಸಲು ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಇಲಾಖೆ ಮಟ್ಟದಲ್ಲಿ ಆಗುವ ಕಾರ್ಯವನ್ನು ಮಾಡಲಾಗುವುದು. ಉಳಿದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಸರ್ಕಾರಿ ಆದೇಶ ಹೊರಬೀಳದ ಹಿನ್ನೆಲೆಯಲ್ಲಿ ಹೋರಾಟ ಮುಂದುವರೆಸಲಾಗಿದೆ ಎಂದು ಹೇಳಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಫ್ರೀಡಂಪಾರ್ಕ್ನಲ್ಲಿ ವಾರದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಶೌಚಾಲಯ, ಕುಡಿಯುವ ನೀರಿನ ತೊಂದರೆಯಿಂದ ದೇಹ ದಂಡನೆ ಮಾಡಿಕೊಳ್ಳುತ್ತಿದ್ದೇವೆ. ಆದರೂ ಸರ್ಕಾರ ಕರುಣೆ ತೋರುತ್ತಿಲ್ಲ. ಸಂಘಟನೆಗಳನ್ನು ವಿಭಜಿಸುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ನಾವು ಮಣಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Articles You Might Like

Share This Article