ನವದೆಹಲಿ,ಜು.29- ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಿಂಗಾಪುರ ಪ್ರವಾಸ ರದ್ದುಗೊಂಡಿರುವುದಕ್ಕೆ ಸಂಬಂಧಪಟ್ಟಂತೆ ಅಮ್ಆದ್ಮಿ ಮತ್ತು ಕೇಂದ್ರ ಸರ್ಕಾರದ ನಡುವೆ ಆರೋಪ- ಪ್ರತ್ಯಾರೋಪಗಳು ತೀವ್ರಗೊಂಡಿವೆ.
ಕೇಂದ್ರ ಸರ್ಕಾರದ ದುರುದ್ದೇಶ ಪೂರ್ವಕ ವಿಳಂಬದಿಂದಾಗಿ ಅರವಿಂದ ಕೇಜ್ರಿವಾಲ್ ಅವರ ವಿದೇಶಿ ಪ್ರವಾಸ ರದ್ದುಗೊಂಡಿಂದೆ ಎಂದು ದೆಹಲಿ ಸರ್ಕಾರ ಆರೋಪಿಸಿದೆ.ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ತಿರುಗೇಟು ನೀಡಿದ್ದು, ಸಿಂಗಾಪುರ ದೇಶ ಕೇಜ್ರಿವಾಲ್ ಅವರ ಆಹ್ವಾನವನ್ನು ವಜಾಗೊಳಿಸಿದೆ ಎಂದು ಸ್ಪಷ್ಟಪಡಿಸಿದೆ.
ದೆಹಲಿ ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ ಸಿಂಗಾಪುರದಲ್ಲಿ ಆಗಸ್ಟ್ ಮೊದಲ ವಾರ ನಡೆಯುವ ವಿಶ್ವ ನಗರಗಳ ಸಮ್ಮೇಳನದಲ್ಲಿ ಭಾಗವಹಿಸಲು ಕೇಜ್ರಿವಾಲ್ ಅವರಿಗೆ ಆಹ್ವಾನವಿತ್ತು.
ಅದಕ್ಕಾಗಿ ಜು.20ರ ಒಳಗಾಗಿ ಎಲ್ಲಾ ತಯಾರಿಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅನುಮತಿಗಾಗಿ ಲೆಫ್ಟಿನೆಂಟ್ ಗೌರ್ನರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಅರ್ಜಿಯನ್ನು ನೆನೆಗುದಿಯಲ್ಲಿಟ್ಟ ಲೆಫ್ಟಿನೆಂಟ್ ಗೌರ್ನರ್ ಅವರು ಜು.21ರಂದು ಅರ್ಜಿಯನ್ನು ವಾಪಸ್ ಕಳುಹಿಸಿದ್ದಾರೆ.
ಕೇಂದ್ರ ಸರ್ಕಾರದ ವಿಳಂಬದಿಂದಾಗಿ ಬೇಸರಗೊಂಡ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪ್ರವಾಸವನ್ನೇ ರದ್ದು ಮಾಡಿದ್ದಾರೆ ಎಂದು ದೆಹಲಿ ಸರ್ಕಾರ ತಿಳಿಸಿದೆ.ಆದರೆ, ಇದನ್ನು ಅಲ್ಲಗಳೆದಿರುವ ಕೇಂದ್ರ ವಿದೇಶಾಂತ ಸಚಿವಾಲಯ ಸಿಂಗಾರಪು ಸರ್ಕಾರ ನೀಡಿದ್ದ ಆಹ್ವಾನವನ್ನು ತಕ್ಷಣವೇ ಗಮನಿಸಿ ಜು.21ರೊಳಗೆ ಸಹಮತ ವ್ಯಕ್ತಪಡಿಸಬೇಕಿತ್ತು. ಆದರೆ, ಅರವಿಂದ್ ಕೇಜ್ರಿವಾಲ್ ಅವರು ತಡವಾಗಿ ಆಹ್ವಾನ ನೋಡಿಕೊಂಡಿದ್ದಾರೆ.
ಗಡುವು ಮುಗಿಯುವ ಹಿಂದಿನ ದಿನ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ದೆಹಲಿ ಮುಖ್ಯಮಂತ್ರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಿಂಗಾಪುರ ಸರ್ಕಾರವೇ ಆಹ್ವಾನ ಹಿಂಪಡೆದಿದೆ. ಪ್ರವಾಸ ರದ್ದುಗೊಂಡಿರುವುದಕ್ಕೆ ಕೇಂದ್ರ ಸರ್ಕಾರ ಕಾರಣವಲ್ಲ. ಸ್ವತಃ ಅರವಿಂದ್ ಕೇಜ್ರಿವಾಲ್ ಅವರೇ ಹೊಣೆ ಎಂದು ತಿರುಗೇಟು ನೀಡಿದೆ.