ಪರ್ತ್,ಮಾ.4- ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಮೇಲಿನ ದಾಳಿ ಮುಂದುವರೆದಿದ್ದು,ಕಳೆದ ರಾತ್ರಿ ಬ್ರಿಸ್ಬೇನ್ ನಗರದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ದೇಗುಲದಲ್ಲಿ ದುಷ್ಕರ್ಮಿಗಳು ವಿಧ್ವಂಸಕ ಕೃತ್ಯ ನಡೆಸಿದ್ದಾರೆ.
ಎರಡು ತಿಂಗಳಲ್ಲಿ ಆಸ್ಟ್ರೇಲಿಯದಲ್ಲಿ ಹಿಂದೂ ದೇಗುಲಗಳ ಮೇಲೆ ನಡೆದ ನಾಲ್ಕನೇ ಘಟನೆ ಇದಾಗಿದೆ. ಇಂದು ಬೆಳಗ್ಗೆ ಭಕ್ತರು ಪೂಜೆ ಸಲ್ಲಿಸಲು ಆಗಮಿಸಿದಾಗ ವಿಧ್ವಂಸಕ ಕೃತ್ಯ ನಡೆದಿರುವುದು ಗಮನಕ್ಕೆ ಬಂದಿದ್ದು ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರಿಸ್ಬೇನ್ನ ದಕ್ಷಿಣ ಭಾಗದಲ್ಲಿರುವ ಬಬ್ರ್ಯಾಂಕ್ ಉಪನಗರದಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯವನ್ನು ಖಲಿಸ್ತಾನಿ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ ಎಂದು ಆಸ್ಟ್ರೇಲಿಯ ಸುದ್ದಿಮಾಧ್ಯಮಗಳು ವರದಿ ಮಾಡಿದೆ.
ದೇವಸ್ಥಾನದ ಅರ್ಚಕರು ಮತ್ತು ಭಕ್ತರು ಕರೆ ಮಾಡಿ ನಮ್ಮ ದೇವಾಲಯದ ಮೇಲೆ ನಡೆದಿರುವ ವಿಧ್ವಂಸಕ ಕೃತ್ಯಗಳ ಬಗ್ಗೆ ನನಗೆ ಮಾಹಿತಿ ನೀಡಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ಆರಂಭಿಸಿದ್ದಾರೆ.
Australia, Attack, Hindu Temple, Shree Laxmi Narayan, Temple, Brisbane,