ಬೆಂಗಳೂರು,ಜ.28- ಮೂರನೆ ಅಲೆ ಆರಂಭದಲ್ಲಿ ಕೊರೊನಾ ಅಬ್ಬರಿಸಿದ್ದರೂ ಸಾವಿನ ಪ್ರಕರಣಗಳು ಹೆಚ್ಚಿರಲಿಲ್ಲ. ಹೀಗಾಗಿ ಜನ ಆತಂಕಕ್ಕೆ ಒಳಗಾಗಿರಲಿಲ್ಲ. ಆದರೆ, ಇತ್ತೀಚಿನ ವರದಿಗಳನ್ನು ಗಮನಿಸಿದರೆ ಸೋಂಕಿನ ಜತೆಗೂ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಭೀತಿ ಹುಟ್ಟಿಸಿದೆ. ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಸಾವಿನ ಪ್ರಕರಣಗಳು ಹೆಚ್ಚುತ್ತಲೆ ಇರುವುದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತರ ಆರೋಗ್ಯದ ಮೇಲೆ ಕಣ್ಣಿಟ್ಟಿದ್ದಾರೆ.
ಕಳೆದ 10 ದಿನಗಳಿಂದ ರಾಜ್ಯದಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿರುವುದರಿಂದ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ.
# ಯಾವಾಗ ಎಷ್ಟೆಷ್ಟು ಸಾವು:
ದಿನಾಂಕ ಕೇಸ್ ಸಾವು
ಜ.18 – 41457 – 20
ಜ.19 – 40499 – 21
ಜ.20 – 47754 – 29
ಜ.21 – 48049 – 22
ಜ.22 – 42470 – 26
ಜ.23 – 50210 – 19
ಜ.24 – 46426 – 32
ಜ.25 – 41400 – 52
ಜ.26 – 48905 – 39
ಜ.27 – 38083 – 49
ಕಳೆದ ಹತ್ತು ದಿನಗಳಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದರೂ ಜ.25 ರಂದು ಒಂದೇ ದಿನ 52 ಮಂದಿ ಸಾವಿಗೀಡಾಗಿದ್ದರೆ, ನಿನ್ನೆ 49 ಮೃತಪಡುವ ಮೂಲಕ ಇದುವರೆಗೂ ಕೊರೊನಾ ಮಾಹಾಮಾರಿಗೆ 309 ಮಂದಿ ಬಲಿಯಾಗಿದ್ದಾರೆ.
ಕೊರೊನಾ ಸೋಂಕು ಕಾಣಿಸಿಕೊಂಡವರು ಸಾರಿ, ಐಎಲ್ಐ ನಿಂದ ಬಳಲುತ್ತಿದ್ದವರೆ ಅತಿ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿರುವುದರಿಂದ ಅಂತಹ ರೋಗಿಗಳು ಸೋಂಕು ಕಾಣಿಸಿಕೊಂಡಾಗ ಬಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.
ಹೀಗಾಗಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಶ್ವಾಸಕೋಶ ಸಮಸ್ಯೆ, ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಕೊರೊನಾ ಕಾಣಿಸಿಕೊಂಡರೆ ತಕ್ಷಣ ತಜ್ಞ ವೈದ್ಯರನ್ನು ಭೇಟಿಯಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಜಾರಿಯಲ್ಲಿರುವ ಕಠಿಣ ನಿಯಮಗಳನ್ನು ತೆಗೆದ್ರೆ ರಾಜ್ಯಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ನಾವು ಕಾದು ನೋಡುವ ನಿರ್ಧಾರಕ್ಕೆ ಮುಂದಾಗಿದ್ದೇವೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.
