Friday, April 19, 2024
Homeರಾಜ್ಯಶಾಸಕರಿಗೆ 50 ಕೋಟಿ ಆಮಿಷವೊಡ್ಡಿದ್ದು ಯಾರೆಂದು ಬಹಿರಂಗಪಡಿಸಿ : ಯತ್ನಾಳ್ ಸವಾಲ್

ಶಾಸಕರಿಗೆ 50 ಕೋಟಿ ಆಮಿಷವೊಡ್ಡಿದ್ದು ಯಾರೆಂದು ಬಹಿರಂಗಪಡಿಸಿ : ಯತ್ನಾಳ್ ಸವಾಲ್

ವಿಜಾಪುರ,ನ.1- ನಮ್ಮ ಪಕ್ಷದ ಯಾರೊಬ್ಬರೂ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಸೇರುವಂತೆ 50 ಕೋಟಿ ಹಣದ ಆಮಿಷವೊಡ್ಡಿರುವ ಆಡಿಯೋ ಇಲ್ಲವೆ ವಿಡಿಯೋಗಳಿದ್ದರೆ ಕೂಡಲೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ರಾಜ್ಯದ ಜನತೆ ಸ್ಪಷ್ಟ ಜನಾದೇಶ ನೀಡಿದ್ದಾರೆ. ಆಡಳಿತ ನಡೆಸಲು ಆಗದವರು ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲದ ಹುಸಿ ಸುದ್ದಿಯನ್ನು ತೇಲಿಬಿಟ್ಟಿದ್ದಾರೆ. ಒಂದು ವೇಳೆ ಶಾಸಕರಿಗೆ ಹಣದ ಆಮಿಷವೊಡ್ಡಿರುವ ದಾಖಲೆಗಳಿದ್ದರೆ ಬಿಡುಗಡೆ ಮಾಡಲು ಹಿಂದೇಟು ಏಕೆ ಎಂದು ಪ್ರಶ್ನೆ ಮಾಡಿದರು.

100, 50 ಕೋಟಿ ಎಂದು ಹೇಳುತ್ತಿರುವವರು ಮಾರುಕಟ್ಟೆಯಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಯಾರಾದರೂ ಕರೆಯಲಿ ಎಂದು ಇವರೇ ಹಣದ ಅಂತೆಕಂತೆಗಳನ್ನು ಸೃಷ್ಟಿಸುತ್ತಿದ್ದಾರೆ. ದಾಖಲೆಗಳಿದ್ದರೆ ಬಿಡುಗಡೆ ಮಾಡಲು ಹಿಂದೇಟು ಏಕೆ? ಇನ್ನು ಯಾವುದಾದರೂ ಮುಹೂರ್ತ ಕೂಡಿಬರಬೇಕೇ ಎಂದು ಪರೋಕ್ಷವಾಗಿ ಶಾಸಕ ರವಿ ಗಾಣಿಗ ವಿರುದ್ಧವೂ ವಾಗ್ದಾಳಿ ನಡೆಸಿದರು.

ಇಟಲಿಯಿಂದ ಪಂಜಾಬ್‍ಗೆ ಬಂದು ಪತ್ನಿ ಕೊಂದ ಅನಿವಾಸಿ ಭಾರತೀಯ

ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಈಗಾಗಲೇ 5 ತಿಂಗಳಲ್ಲಿ ಸರ್ಕಾರದ ಹಣೆಬರಹ ಏನೆಂಬುದು ಜನತೆಗೆ ಗೊತ್ತಾಗಿದೆ. ನನ್ನ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಮಹಾನ್ ನಾಯಕರೊಬ್ಬರು ಮಧ್ಯವರ್ತಿಗಳನ್ನು ಮುಂದಿಟ್ಟುಕೊಂಡು ಸಿ.ಡಿ ನಾಟಕ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಿ.ಡಿ ತಯಾರಿಸುವ ಕಂಪನಿಯೇ ಇದೆ. ಇದಕ್ಕೆ ಪ್ರಮುಖ ನಾಯಕರೊಬ್ಬರು ಮುಖ್ಯಸ್ಥರೆಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಆಡಳಿತ ನಡೆಸಲು ಅವಕಾಶ ನೀಡದ ಕೆಲವರು ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಬೇಕೆಂದು ಹವಣಿಸುತ್ತಿದ್ದಾರೆ. ಕುರ್ಚಿ ಸಿಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ತಮ್ಮ ಬೆಂಬಲಿಗರ ಮೂಲಕ ಆಪರೇಷನ್ ಕಮಲ ಕೃಪಾಪೊಷಿತ ನಾಟಕವನ್ನು ಮಾಧ್ಯಮದ ಮುಂದೆ ಬಿಡುತ್ತಾರೆ. ಎಲ್ಲವೂ ಸದ್ಯದಲ್ಲೇ ಬಹಿರಂಗವಾಗಲಿದೆ. ಕಾದು ನೋಡಿ ಎಂದು ಯತ್ನಾಳ್ ಹೇಳಿದರು.

RELATED ARTICLES

Latest News