ಬೆಂಗಳೂರು, ಜು.12- ಹಾಡು ಹಗಲೆ ಭಾರಿ ಬೆಲೆಬಾಳುವ ಕಾರು ಕಳವು ಮಾಡಿಕೊಂಡು ಹೋಗುತ್ತದ್ದ ಕಳ್ಳನನ್ನು ಬೆನ್ನಟ್ಟಿ ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ನಿವಾಸಿ ಶೂಟರ್ ಸಲ್ಮಾನ್ (31) ಬಂಧಿತ ಆರೋಪಿ.
ಯಡಿಯೂರು ಸರ್ಕಲ್ಬಳಿಯ ಮನೆಯೊಂದರ ಪಾರ್ಕಿಂಗ್ ಸ್ಥಳದಲ್ಲಿದ್ದ 3 ಕಾರುಗಳ ಪೈಕಿ ಸುಮಾರು 23 ಲಕ್ಷ ಬೆಲೆಯ ಒಂದು ಕಾರನ್ನು ಆರೋಪಿ ಚಲಾಯಿಸಿಕೊಂದು ಹೋಗಿದ್ದನು.
ಮೊನ್ನೆ ಬೆಳಗ್ಗೆ ಆ ಮನೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ 3 ಐಷಾರಾಮಿ ಕಾರುಗಳು ಹಾಗೂ ಅಲ್ಲೆ ಹೋಲ್ಡರ್ನಲ್ಲಿ ಇಟ್ಟಿದ್ದ ಕಾರಿನ ಕೀಯನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಟೀ ಕುಡಿಯಲು ಹೋದ ಸಮಯವನ್ನು ಹೊಂಚುಹಾಕಿ ಕೂತಿದ್ದಾನೆ.
ನಂತರ ಸೆಕ್ಯೂರಿಟಿ ಗಾರ್ಡ್ ಟೀ ಕುಡಿಯಲು ಹೊರಗೆ ಹೋಗಿದ್ದಾಗ ಆರೋಪಿ ಮನೆಯ ಪಾರ್ಕಿಂಗ್ ನಿಂದ ಕಾರನ್ನು ಹೊರಗೆ ಓಡಿಸಿಕೊಂಡು ಬರುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಅಡ್ಡ ಬರುತ್ತಿದ್ದನ್ನು ನೋಡಿ ಆತನ ಮೇಲೆ ಕಾರು ಹತ್ತಿಸುವಂತೆ ಮಾಡಿ ಅಲ್ಲಿಂದ ಕಾರು ಸಮೇತ ಪರಾರಿಯಾಗಿದ್ದನು.
ಸುದ್ದಿ ತಿಳಿದ ಬಸವನಗುಡಿ ಪೊಲೀಸರು ಎಲ್ಲೆಡೆ ಮಾಹಿತಿ ನೀಡಿ ಆರೋಪಿ ಕಾರನ್ನು ಬೆನ್ನಟ್ಟಿದರು. ಕಾರು ಹೆಚ್ಬಿಆರ್ ಲೇಔಟ್ ಬಳಿ ಹೊಗುತ್ತಿದ್ದಾಗ ಕೆಜಿ ಹಳ್ಳಿ ಠಾಣೆ ಪೊಲೀಸರ ನೆರವಿನಿಂದ ತಡೆದು ಆರೋಪಿಯನ್ನು ಬಂಧಿಸಿ ಕಾರನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಸಲ್ಮಾನ್ ಕಳೆದ 20 ದಿನಗಳ ಹಿಂದೆಯಷ್ಟೆ ಜೈಲಿನಿಂದ ಹೊರಗೆ ಬಂದಿದ್ದನು. ಈತನ ವಿರುದ್ದ ಎಷ್ಟು ಪ್ರಕರಣಗಳಿವೆ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.