ಬೆಂಗಳೂರು,ಅ.11- ನಗರದಲ್ಲಿ ನಡೆಸಲಾಗುತ್ತಿರುವ ಒತ್ತುವರಿಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಕೆಲವು ಕಡೆ ಒತ್ತುವರಿ ಮಾಡಲು ಸಾಧ್ಯವಾಗಿಲ್ಲ. ಉಳಿದಂತೆ ಎಲ್ಲ ಕಡೆ ನಾವು ಒತ್ತುವರಿ ತೆರವು ಕಾರ್ಯಚರಣೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ನಮಗೆ ಶ್ರೀಮಂತರು ಮತ್ತು ಬಡವರು ಅಂತ ಭೇದಭಾವ ಇಲ್ಲ. ಅಪಾರ್ಟ್ಮೆಂಟ್ಗಳ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರೈನ್ಬೋ ಅಪಾರ್ಟ್ ಮೆಂಟ್ ಒತ್ತುವರಿ ವಿಚಾರ ನ್ಯಾಯಾಲಯದಲ್ಲಿದೆ. ತಹಸೀಲ್ದಾರ್ ನೀಡುವ ವರದಿಯನ್ನಾಧರಿಸಿ ನಾವು ಒತ್ತುವರಿ ತೆರವು ಕಾರ್ಯ ಆರಂಭಿಸುತ್ತೇವೆ ಎಂದು ಅವರು ಹೇಳಿದರು.
ಕಂದಾಯ ಇಲಾಖೆಯವರು ಸರ್ವೆ ನಡೆಸಿ ವರದಿ ನೀಡುತ್ತಾರೆ. ಅವರ ವರದಿಯನ್ನಾಧರಿಸಿ ನಾವು ಒತ್ತುವರಿ ತೆರವು ಕಾರ್ಯಚರಣೆ ಮುಂದುವರೆಸುತ್ತೇವೆ. ಒತ್ತುವರಿದಾರರಿಗೆ ಪೊಲೀಸರು ಸಹಕರಿಸುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒತ್ತುವರಿ ತೆರವು ಸಂದರ್ಭದಲ್ಲಿ ಅಡಚಣೆಯಾದರೆ ಮಾತ್ರ ನಾವು ಪೊಲೀಸರ ಸಹಾಯ ಪಡೆದುಕೊಳ್ಳುತ್ತೇವೆ. ಇದರ ಜೊತೆಗೆ ನಾವು ನಮ್ಮಲಿರುವ ಮಾರ್ಷಲ್ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.