ಕಸದ ವಾಹನಗಳಿಗೂ ಬಿಬಿಎಂಪಿಗೂ ಸಂಬಂಧ ಇಲ್ವಂತೆ..!

Social Share

ಬೆಂಗಳೂರು : ಅಡ್ಡಾದಿಡ್ಡಿ ಚಲಿಸಿ ಹಲವಾರು ಅಮಾಯಕರ ಪ್ರಾಣ ಬಲಿ ಪಡೆದುಕೊಳ್ಳುತ್ತಿರುವ ಕಸದ ವಾಹನಗಳಿಗೂ ನಮಗೂ ಸಂಬಂಧವಿಲ್ಲ ಎಂದು ಬಿಬಿಎಂಪಿ ಸಮರ್ಥಿಸಿಕೊಳ್ಳಲು ಮುಂದಾಗಿದೆ. ಇನ್ಮುಂದೆ ಕಸ ವಿಲೇವಾರಿ ಗುತ್ತಿಗೆದಾರರು ಬಳಸುವ ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದೆ.

ಭವಿಷ್ಯದಲ್ಲಿ ಕಸದ ವಾಹನಗಳು ಅಪಘಾತ ಮಾಡಿ ಸಾವು-ನೋವು ಸಂಭವಿಸಿದರೆ ಅದಕ್ಕೂ ಬಿಬಿಎಂಪಿಗೂ ಸಂಬಂಧವಿರಲ್ಲ ಎಂದು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರು ಆದೇಶಿಸಿದ್ದಾರೆ. ಅಪಘಾತದಿಂದ ಸಂಭವಿಸುವ ಸಾವು-ನೋವುಗಳಿಗೂ ಸದರಿ ವಾಹನಗಳ ಮಾಲೀಕರೇ ಪರಿಹಾರ ನೀಡಬೇಕಾಗಿದೆ.

ಇತ್ತಿಚೆಗೆ ಸಂಭವಿಸಿದ ಕಸದ ಲಾರಿಗಳ ಅಪಘಾತಗಳಿಂದ ಹಲವಾರು ಸಾವು-ನೋವು ಆದ ಪ್ರಕರಣಗಳಿಂದ ಬಿಬಿಎಂಪಿ ಮುಜುಗರಕ್ಕೆ ಒಳಗಾಗಿತ್ತು. ಇದರ ಜೊತೆಗೆ ಕೆಲವರು ತಮ್ಮ ಸ್ವಂತ ವಾಹನಗಳ ಮೇಲೂ ಬಿಬಿಎಂಪಿ ನಾಮಫಲಕ ಹಾಕಿಕೊಳ್ಳುತ್ತಿದ್ದರೂ ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ವಿಶೇಷ ಆಯುಕ್ತರು ಇಂತಹ ತೀರ್ಮಾನ ಕೈಗೊಂಡಿದ್ದಾರೆ.

ತಕ್ಷಣದಿಂದಲೇ ಎಲ್ಲಾ ವಾಹನಗಳ ಮೇಲಿರುವ ಬಿಬಿಎಂಪಿ ನಾಮಫಲಕ ತೆರವು ಮಾಡಬೇಕು. ಒಂದು ವೇಳೆ ಆದೇಶ ಉಲ್ಲಂಘಿಸುವ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆದೇಶದಲ್ಲೇನಿದೆ….?

ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಕೋಶದ ಗುತ್ತಿಗೆದಾರರ ಮೂಲಕ ಸರಬರಾಜು ಮಾಡಲಾದ ಎಲ್ಲಾ ಆಟೋ , ಟಿಪ್ಪರ್‍ಗಳು ಕಾಂಪ್ಯಾಕ್ಟರ್‍ಗಳ ಮತ್ತಿತರ ವಾಹನಗಳ ಮೇಲೆ ನಮೂದಿಸಿರುವ ಪಾಲಿಕೆಯ ಸೇವೆಯಲ್ಲಿ ಎಂಬುದನನ್ನು ತೆರವುಗೊಳಿಸಬೇಕು.
ಪಾಲಿಕೆಗೆ ಸಂಬಂಧಿಸಿರದ ಅನಾಮಧೇಯ ವಾಹನಗಳ ಮೇಲೆ ಬೆಂಗಳೂರು ಮಹಾನಗರ ಸೇವೆಯಲ್ಲಿ ಇಲ್ಲವೇ ಬಿಬಿಎಂಪಿ ಸೇವೆಯಲ್ಲಿ ಎಂಬ ನಾಮಫಲಕ ಹಾಕಿದ್ದಲ್ಲಿ ಅಂತಹ ವಾಹನಗಳ ಮೇಲೆ ಮತ್ತು ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು.

ಕಸದ ವಾಹನಗಳ ಎಲ್ಲಾ ಚಾಲಕರ ವಾಹನ ಚಾಲನಾ ಪರವಾನಿಗೆ, ವಾಹನ ಚಲಿಸಲು ದೈಹಿಕ ಸಧೃಡತೆಯ ಪ್ರಮಾಣ ಪತ್ರ, ವಾಹನದ ಪೀಟ್ನೆಸ್ ಪ್ರಮಾಣ ಪತ್ರ, ಇನ್ಸುರೆನ್ಸ್ ಪ್ರಮಾಣ ಪತ್ರಗಳ ತಪಾಸಣೆ ಹಾಗೂ ಅವಶ್ಯ ಕಾಯ್ದೆಗಳನ್ವಯ ಇತರ ತಪಾಸಣೆಗಳನ್ನು ಸಹ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಕೈಗೊಳ್ಳಬಹುದಾಗಿದೆ.

ವಲಯ ಮತ್ತು ವಾರ್ಡ್ ಮಾರ್ಷಲ್‍ಗಳು, ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಕಾರ್ಯಾಚರಣೆಯ ರಸ್ತೆಗಳಲ್ಲಿ ಇಂತಹ ಅನಧಿಕೃತವಾಗಿ ಪಾಲಿಕೆಯ ಹೆಸರನ್ನು ನಮೂದಿಸಿರುವ ನಾಮಫಲಕಗಳನ್ನ ಹಾಕಿರುವ ವಾಹನಗಳನ್ನು ನಿಲ್ಲಿಸಿ ಕೂಡಲೇ ತೆಗೆಸುವುದು.

ಒಂದು ವೇಳೆ ಗುತ್ತಿಗೆದಾರರಿಗೆ ಬಿಬಿಎಂಪಿ ನಾಮಫಲಕಗಳಿಲ್ಲದೇ ಘನತ್ಯಾಜ್ಯ ಸಂಗ್ರಹಣೆ , ಸಾಗಾಣೆ ಮತ್ತು ವಿಲೇವಾರಿಯಲ್ಲಿ ತೊಂದರೆಯಾಗುತ್ತಿದ್ದಲ್ಲಿ , ಅೀಧಿಕ್ಷಕ ಅಭಿಯಂತರರಿಂದ ಲಿಖಿತ ರೂಪದಲ್ಲಿ ಮಾನ್ಯತೆ ಪತ್ರ ಪಡೆದು ಘನತ್ಯಾಜ್ಯ ಸಂಗ್ರಹಣೆ , ಸಾಗಾಣೆ ಮಾಡಬಹುದು.

ಕಾರ್ಯಚರಣೆಯ ಸಮಯದಲ್ಲಿ ಪೋಲಿಸರು ಇಲ್ಲವೆ ಇತರೆ ಅಧಿಕಾರಿಗಳು ಕೇಳಿದ್ದಲ್ಲಿ , ಸದರಿ ಪತ್ರವನ್ನು ಸಲ್ಲಿಸುವುದು.
ಕಸ ಸಾಗಿಸುವ ವಾಹನಗಳ ಅಪಘಾತಗಳಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ಅಥವಾ ಸಾವು – ನೋವು ಸಂಭವಿಸಿದಲ್ಲಿ ಸದರಿ ವಾಹನಗಳ ಮಾಲೀಕರಿಂದಲೇ ಪರಿಹಾರದ ಮೊತ್ತವನ್ನು ದಂಡದ ರೂಪದಲ್ಲಿ ಸಂತ್ರಸ್ತರಿಗೆ ಕೊಡಿಸಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.

Articles You Might Like

Share This Article