ಬೆಂಗಳೂರು, ಮಾ.12- ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ಹೊಸ ದಶಪಥ ಹೆದ್ದಾರಿ ಜನರ ಬದುಕು ಕಟ್ಟುವ ರಹದಾರಿಯಷ್ಟೇ ಆಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಇದನ್ನು ಬಿಟ್ಟು ಕೆಲವರ ಪಾಲಿನ ಎಟಿಎಂ ಆಗಿ, ಸ್ಥಳೀಯ ಜನರ ಬದುಕು ಕಸಿಯುವ ಹೆಮ್ಮಾರಿ ಆಗದಿರಲಿ ಎಂದು ಹೇಳಿದ್ದಾರೆ. ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುವ ಹಾಗೂ ಕೇಂದ್ರದಿಂದ ಅತಿಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಈ ನೀತಿಯ ಕೆನ್ನಾಲಿಗೆಗೆ ಸಿಕ್ಕಿ ಕನ್ನಡಿಗರು ಬೇಯುತ್ತಿದ್ದಾರೆ. ಹೆದ್ದಾರಿ ಕನ್ನಡಿಗರದು, ಅದನ್ನು ಬಳಸುವ ಹಕ್ಕು ಕನ್ನಡಿಗರದು. ಕನ್ನಡಿಗರಿಗೆ ನ್ಯಾಯ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ ಎಂದು ಪ್ರಶ್ನಿಸಿದ್ದಾರೆ. ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು- ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗವಿಲ್ಲ ಎಂದು ಆರೋಪಿಸಿದ್ದಾರೆ.
ಸ್ಥಳೀಯರಿಗೆ ದಶಪಥದಿಂದ ಉಪಯೋಗ ಇದೆಯಾ ಎಂದು ಇನ್ನೂ ಒಳಹೊಕ್ಕು ಲೆಕ್ಕ ಹಾಕಿದರೂ ಸಿಗುವ ಉತ್ತರ ದೊಡ್ಡ ಸೊನ್ನೆ. ಕೇವಲ ಬೆಂಗಳೂರಿನಿಂದ ಮೈಸೂರಿಗೆ ಶರವೇಗದಲ್ಲಿ ನೇರವಾಗಿ ಸಂಚರಿಸುವವರಿಗೆ ಮಾತ್ರ ಲಾಭವಾಗಲಿದೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದವರಿಗೆ ಉಪಯೋಗ ಎಳ್ಳಷ್ಟೂ ಇಲ್ಲ. ಈ ಸತ್ಯವನ್ನು ನಾವೆಲ್ಲರೂ ಅರಿಯಬೇಕಿದೆ ಎಂದಿದ್ದಾರೆ.
ಗುಡಿಸಲಿಗೆ ಬೆಂಕಿ ಬಿದ್ದು ಮೂರು ಮಕ್ಕಳು ಸೇರಿ ಐವರು ಸಜೀವ ದಹನ
ಕೆಲವರ ಪಾಲಿಗೆ ದೊಡ್ಡ ಎಟಿಎಂ ಆಗಿಬಿಟ್ಟಿರುವ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯ ಅಸಲಿ ಅಂಶಗಳನ್ನು ಪಟ್ಟಿ ಮಾಡಿದರೆ ಕನ್ನಡಿಗರಿಗೆ ನಿರಾಶೆ, ನೋವು, ಹತಾಶೆ ಖಂಡಿತಾ ಆಗುತ್ತದೆ. ಈ ದಶಪಥ ಹೆದ್ದಾರಿಯ ಮಾರಣಾಂತಿಕ ಹೊಡೆತ ಮೊದಲು ಬಿದ್ದಿರುವುದು ಮಂಡ್ಯ ಜಿಲ್ಲೆ ಜನರಿಗೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ಜಿಲ್ಲೆಯನ್ನು ಮುಗಿಸುವುದೇ ದಶಪಥ ಹೆದ್ದಾರಿಯ ದುರುದ್ದೇಶವೇ? ಜಿಲ್ಲೆಯ ಆರ್ಥಿಕ ಸರಪಳಿಗೆ ಕುಣಿಕೆ ಬಿಗಿಯುವುದೇ ಇದರ ಒಳ ಉದ್ದೇಶವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಮ, ಸಣ್ಣ ಗಾತ್ರದ ಹೊಟೇಲು, ಸಣ್ಣ, ಅತಿಸಣ್ಣ ಉದ್ದಿಮೆ, ಕಬ್ಬು, ಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು 2600ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲಕಚ್ಚಿವೆ. ಎಳನೀರು ವ್ಯಾಪಾರಕ್ಕೆ ಎಳ್ಳುನೀರು ಬಿಡಲಾಗಿದೆ. 6000ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಹೊಡೆತ ಬಿದ್ದು, ಅವರ ಬದುಕಿನ ಮೇಲೆ ಹೆದ್ದಾರಿ ಹೆಮ್ಮಾರಿ ಬಂದು ಕೂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ, ರಾಮನಗರ ಜಿಲ್ಲೆಗಳ ಜನರ ಜೀವನಾಡಿಯೇ ಆಗಿದ್ದ ಹಳೆಯ ಹೆದ್ದಾರಿ ಲಕ್ಷಾಂತರ ಜನರ ಜೀವನಕ್ಕೆ ದಾರಿ ಆಗಿತ್ತು. ಹೊಸ ಹೆದ್ದಾರಿ ಕೆಲವರಿಗೆ ಹಣದ ದಾರಿಯಷ್ಟೆ. ಜನರ ಜೀವನೋಪಾಯದ ಸರಪಳಿಯನ್ನು ಎಕ್ಸ್ಪ್ರೆಸ್ ಹೆದ್ದಾರಿ ಬಲಿ ತೆಗೆದುಕೊಂಡಿದೆ. ಅವರ ವೈಯಕ್ತಿಕ ಬದುಕಿಗೆ, ಆರ್ಥಿಕ ಶಕ್ತಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಹಳೆಯ ಹೆದ್ದಾರಿ ಜತೆ ಹಾಸು ಹೊಕ್ಕಾಗಿದ್ದ ಜನರು, ಈಗ ತಮ್ಮ ಊರುಗಳಿಗೆ ತೆರಳಲು ಕನಿಷ್ಠ 10ರಿಂದ 25 ಕಿ.ಮೀ. ಸುತ್ತಿ ಬರಬೇಕಿದೆ. ಸ್ಥಳೀಯರಿಗೆ ಸುತ್ತುವ ಶಿಕ್ಷೆ ಯಾಕೆ? ಭೂಮಿ ಕಳೆದುಕೊಂಡ ಪುಣ್ಯಕ್ಕೆ ಅವರು ಬಳಸಿ ಬಳಿಸಿ ಬಸವಳಿದು ತಮ್ಮ ಹಳ್ಳಿಗಳಿಗೆ ಬರಬೇಕಾ? ಇದು ಯಾವ ಸೀಮೆಯ ನ್ಯಾಯ? ದಶಪಥ ಕಲ್ಪಿಸಿದ ದೌರ್ಭಾಗ್ಯ ಇದು ಎಂದು ಆರೋಪಿಸಿದ್ದಾರೆ.
ದ್ವಿಚಕ್ರ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ನಿರಾಕರಿಸಿದ್ದು ಏಕೆ? ಇದು ಅವೈಜ್ಞಾನಿಕ ಮತ್ತು ಅಕ್ಷಮ್ಯ. ಷಟ್ಪಥದ (ಆರು ಪಥ) ಮುಖ್ಯ ಕಾರಿಡಾರಿನಲ್ಲಿ ಕೊನೆಯಪಕ್ಷ ಎರಡನ್ನಾದರೂ ದ್ವಿಚಕ್ರ ವಾಹನಗಳಿಗೆ ಮೀಸಲಿಡಬಾರದೇಕೆ? ಇದೇನು ಬಿಟ್ಟಿ ಉಪಕಾರವೇ? ಆ ಜನರ ಹಕ್ಕು ಎಂದು ವಾಗ್ದಾಳಿ ನಡೆಸಿದ್ದಾರೆ.
30 ವರ್ಷಕಾಲ ಈ ಹೆದ್ದಾರಿಯಲ್ಲಿ ಸಂಚರಿಸುವ ಜನರು ಟೋಲ್ ಕಟ್ಟುತ್ತಾರೆ. ಸಂಗ್ರಹವಾಗುವ ಶುಲ್ಕದ ಮೂಲಕವೇ ರಸ್ತೆ ನಿರ್ಮಾಣದ ಖರ್ಚನ್ನು ಜನರೇ ಭರಿಸುತ್ತಾರೆ. ಗುತ್ತಿಗೆದಾರರ ಜೇಬಿಗೆ ಬಹುದೊಡ್ಡ ಗಂಟು ಸೇರಲಿದೆ. ಕೇಂದ್ರದ ಬಿಜೆಪಿ ಸರ್ಕಾರದಿಂದ ಈ ಯೋಜನೆಗೆ ಬಿಡಿಗಾಸು ಬಂದಿಲ್ಲ. ದಶಪಥದ ಒಳಲೆಕ್ಕಗಳ ಸತ್ಯ ಜನರಿಗೆ ಗೊತ್ತಾಗಬೇಕಿದೆ.
ಸ್ಪೋಟಕ ತಯಾರಿಕೆ : ಎನ್ಐಎ ದಾಳಿ, 2 ಶಂಕಿತರ ಬಂಧನ
ಕನ್ನಡಿಗರಿಗೆ ಕಣ್ಣಿಗೆ ಮಂಕುಬೂದಿ ಎರಚಿ, ಈ ಸತ್ಯವನ್ನು ಮರೆಮಾಚಿ, ತಾವೇ ಈ ರಸ್ತೆ ನಿರ್ಮಾಣಕ್ಕೆ ಕಾರಣ ಎಂದು ಬಿಜೆಪಿಗರು ಬೊಬ್ಬೆ ಹೊಡೆಯುತ್ತಿರುವುದು ದಶಪಥ ಹೆದ್ದಾರಿ ಹೆಸರಿನಲ್ಲಿ ಮಾಡುತ್ತಿರುವ ಮಹಾದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೆದ್ದಾರಿಯ ನಿಜವಾದ ಹಕ್ಕುದಾರರಾದ ರಾಮನಗರ, ಮಂಡ್ಯ ಜನರನ್ನು ಪರಾವಲಂಭಿಗಳನ್ನಾಗಿ ಮಾಡಿದ್ದಲ್ಲದೆ, ಭೂಮಿ ಕಳೆದುಕೊಂಡ ಬಡರೈತರು ಹೆದ್ದಾರಿ ಬದಿ ನಿಂತು ಭಿಕ್ಷೆ ಬೇಡುವಂಥ ದುಃಸ್ಥಿತಿಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ.
ದಶಪಥ ಹೆದ್ದಾರಿ ಕಸಿದುಕೊಂಡ ಬದುಕಿಗೆ ಉತ್ತರದಾಯಿ ಯಾರು? ಅವರ ಜೀವನೋಪಾಯಕ್ಕೆ ಪರ್ಯಾಯ ದಾರಿ ಯಾವುದು? ಪ್ರಧಾನಮಂತ್ರಿಗಳು ಈ ಬಗ್ಗೆ ಜನರಿಗೆ ವಿಶ್ವಾಸ ತುಂಬಬೇಕು. ರೋಡ್ ಶೋ ಮಾಡುವುದಕ್ಕಿಂತ ತುರ್ತಾಗಿ ಮಾಡಬೇಕಿರುವುದು ಇದನ್ನು. ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ ಆಗಬಾರದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
Bengaluru, Mysore, Highway, HD Kumaraswamy,