ಬೆಂಗಳೂರು, ನ.26- ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಅಕ್ರಮಗಳು ನಡೆದಿರುವುದರಿಂದ ಮರು ಪರಿಷ್ಕರಣೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಮಾಹಿತಿ ಕಳವು ವಿಚಾರವಾಗಿ ಕಾಂಗ್ರೆಸ್ ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗವು ಹಿರಿಯ ಚುನಾವಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ನಾನು ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮೇಲಿನವರ ಆದೇಶದ ಮೇರೆಗೆ ನಾವು ಕೆಲಸ ಮಾಡಿದ್ದೇವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಈ ಆದೇಶ ಕೊಟ್ಟವರು ಯಾರು ಎಂಬುದು ಗೊತ್ತಾಗಬೇಕಿದೆ ಎಂದರು.
ಈ ಹಗರಣವನ್ನು ಬಿಬಿಎಂಪಿ ತನಿಖೆ ನಡೆಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಅಥವಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು. ಅವರ ಉಸ್ತುವಾರಿಯಲ್ಲೇ ಚುನಾವಣೆ ನಡೆಯಬೇಕು.
ಯಾವುದೇ ಮತವನ್ನು ಸೇರ್ಪಡೆ ಮಾಡುವಾಗ ಅಥವಾ ತೆಗೆಯುವಾಗ ಆಯಾ ವ್ಯಕ್ತಿಯ ಅರ್ಜಿ ಇರಲೇಬೇಕು. ಬಿಎಲ್ಒಗಳನ್ನು ಯಾರು ನೇಮಕ ಮಾಡಿದ್ದರು? ಈ ಬಿಎಲ್ಒಗಳನ್ನು ಕೇವಲ 3 ಕ್ಷೇತ್ರ ಚುನಾವಣಾಧಿಕಾರಿಗಳು ಮಾತ್ರ ಮಾಡಿಲ್ಲ. ಎಲ್ಲಾ 28 ಕ್ಷೇತ್ರಗಳ ಚುನಾವಣಾಧಿಕಾರಿಗಳೂ ಮಾಡಿದ್ದಾರೆ.
ಸುಮಾರು 6-7 ಸಾವಿರ ಮಂದಿಗೆ ಈ ಬಿಎಲ್ಒ ಗುರುತಿನ ಚೀಟಿ ಕೊಟ್ಟಿದ್ದಾರೆ. ಇದರಲ್ಲಿ ಕೆಲವರು ಅಮಾಯಕರಿದ್ದು, ಹೊಟ್ಟೆ ಪಾಡಿಗೆ ಕೆಲಸಕ್ಕೆ ಎಂದು ಸೇರಿದ್ದಾರೆ. ಇದರ ಮೂಲ ಕಿಂಗ್ ಪಿನ್ ಆಗಿ ಸರ್ಕಾರದ ಸಚಿವರು, ಶಾಸಕರಾಗಿದ್ದಾರೆ. ಅವರಿಲ್ಲದೇ ಈ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದರು.
ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕಾಗಿ ಪಕ್ಷಾತೀತ ಹೋರಾಟಕ್ಕೆ ಸಜ್ಜು
ರಾಜರಾಜೇಶ್ವರಿನಗರದಲ್ಲೂ ದಾಳಿ ನಡೆಸಿ ದಾಖಲೆ ಸಂಗ್ರಹಿಸಲಾಗಿದೆ. ಎಲ್ಲಾ 28 ಕ್ಷೇತ್ರಗಳಲ್ಲಿ ಈ ಅಕ್ರಮ ನಡೆದಿದೆ. ಎಲ್ಲ ಕಡೆ ತನಿಖೆ ನಡೆಯಬೇಕಿದೆ. ಇಲ್ಲೆಲ್ಲ ಮತದಾರರ ಪಟ್ಟಿ ಮರುಪರಿಷ್ಕರಣೆ ಆಗಬೇಕು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಲಿತು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದಾರೆ. ಕೆಲವರ ಹೆಸರನ್ನು ತೆಗೆದು ಹಾಕಲಾಗಿದೆ.
ಅರ್ಜಿ ಇಲ್ಲದೆ ಹೇಗೆ ಹೆಸರು ತೆಗೆದಿದ್ದಾರೆ. ಒಂದು ವೇಳೆ ಮತದಾರ ಮೃತಪಟ್ಟಿದ್ದರೆ, ಮನೆ ಬದಲಾವಣೆ ಮಾಡಿದ್ದರೆ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ನೆರೆಹೊರೆಯವರಲ್ಲಿ ವಿಚಾರಿಸಿ ವರಿದ ಸಲ್ಲಿಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು. ಅಂತಹದ್ದರಲ್ಲಿ ರಾಜಕೀಯ ಲಾಭಕ್ಕೆ ಯಾವುದೋ ಕಚೇರಿಯಲ್ಲಿ ಕುಳಿತು ಪರಿಷ್ಕರಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಯಾವುದೋ ಸಂಸ್ಥೆ, ಶಾಸಕರು ಹಾಗೂ ಸಚಿವರ ಕಚೇರಿಯಲ್ಲಿ ಕೂತು ಅವರಿಗೆ ಬೇಕಾದಂತೆ ಮತದಾರರ ಪಟ್ಟಿ ಪರಿಷ್ಕರಣೆಯಾಗಿದೆ. ಇದರ ಹಿಂದೆ ದೊಡ್ಡ ಸಂಚೇ ಇದೆ ಎಂದು ಅನುಮಾನ ವ್ಯಕ್ತ ಪಡಿಸಿದರು.
ನಿನ್ನೆ ವಿಚಾರ ಪ್ರಸ್ತಾಪಿಸಿದಂತೆ ಕೇಂದ್ರ ಸರ್ಕಾರದ ಸಂಸ್ಥೆ ಮೂಲಕ ಖಾಸಗಿ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಹೇಗೆ ವರ್ಗಾವಣೆ ಆಯಿತು? ಯಾವ ಕಾರಣಕ್ಕೆ ಹಣ ನೀಡಲಾಗಿದೆ? ಈ ಬಗ್ಗೆ ತನಿಖೆ ಆಗಬೇಕು. ಮಂತ್ರಿಯೊಬ್ಬರು ಆರಂಭದಲ್ಲಿ ನನಗೆ ಈ ಸಂಸ್ಥೆ ಗೊತ್ತೇ ಇಲ್ಲ ಎಂದರು.
ನಂತರ ಈ ಸಂಸ್ಥೆ ಗೊತ್ತಿದೆ, ಆದರೆ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿದರು. ಸಚಿವರು ಹಾಗೂ ಈ ಸಂಸ್ಥೆ ನಿರ್ದೇಶಕರ ಮಧ್ಯೆ ದೂರವಾಣಿ ಮಾತುಕತೆ ಎಲ್ಲವೂ ಇದೆ. ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಸತ್ಯಾಂಶ ಹೊರಬರಲಿ ಎಂದು ಆಗ್ರಹಿಸಿದರು.
ಮಹದೇವಪುರ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಈ ಕೆಲಸ ಮಾಡಿದ್ದೇವೆ ಎಂಬ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಪ್ರತಿ ಕ್ಷೇತ್ರದಲ್ಲೂ ಮತದಾರರ ಸೇರ್ಪಡೆ ಹಾಗೂ ಅಳಿಸಿರುವ ಪಟ್ಟಿ ಸಂಪೂರ್ಣವಾಗಿ ಮರು ಪರಿಷ್ಕರಣೆ ಆಗಬೇಕು.
ಪ್ರತಿ ಮನೆಗೂ ಹೋಗಿ ಯಾರು ಸತ್ತಿದ್ದಾರೆ, ಯಾರು ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದಾರೆ ಎಂಬುದನ್ನು ನೋಡಿ ನಂತರ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಿ. ಒಂದು ಕುಟುಂಬದ ಮತಗಳನ್ನು ಬೇರೆ, ಬೇರೆ ಬೂತ್ ಗಳಿಗೆ ವರ್ಗಾವಣೆ ಮಾಡಬಾರದು. ಆ ಕೆಲಸವೂ ಇಲ್ಲಿ ನಡೆದಿದೆ. ಇದೆಲ್ಲವೂ ಸರಿಯಾಗಬೇಕು. ಚುನಾವಣಾ ಆಯೋಗ ನಮ್ಮ ದೂರಿನ ಮೇಲೆ ಕೆಲವರನ್ನು ಅಮಾನತು ಮಾಡಿದೆ. ಆದರೆ ಈ ಮತ ಕಳ್ಳತನ ವಿಚಾರ ನಕಲಿ ನೋಟು ಮುದ್ರಣ ಮಾಡಿದಷ್ಟೇ ಅಪರಾಧ. ಇದಕ್ಕೆ ಜನರೇ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.
ಇತರೆ ವರ್ಗಗಳ ಮೀಸಲಾತಿ ಬೇಡಿಕೆ ಹೆಚ್ಚಳ : ಇಕ್ಕಟ್ಟಿನಲ್ಲಿ ಸರ್ಕಾರ
ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿಯನ್ನು ಅನಧಿಕೃತವಾಗಿ ನೀಡುವುದು ಅಪರಾಧ. ಕಾಂಗ್ರೆಸ್ ಕಾಲದಲ್ಲಿ ಇದು ಆಗಿದ್ದರೆ ತನಿಖೆ ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ವ್ಯವಸ್ಥೆ ಸರಿಮಾಡುವುದು ಮುಖ್ಯ.
ಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟರ ಮತಗಳನ್ನು ತೆಗೆದುಹಾಕಲಾಗುತ್ತಿದೆ. ಆರ್ ಆರ್ ನಗರದಲ್ಲಿ ಗೌಡ ಎಂಬ ಹೆಸರಿದ್ದರೆ ಒಂದು ಹೆಸರು ಉಳಿಸಿಕೊಂಡು ಮೂರು ಹೆಸರು ತೆಗೆಯುತ್ತಾರೆ. ಇದರಲ್ಲಿ ಮಂತ್ರಿ, ಶಾಸಕರು ಇದ್ದಾರೆ. ಶಾಸಕರ ಪತ್ರಗಳು ಈ ಸಂಸ್ಥೆಯ ಕಚೇರಿಯಲ್ಲಿ ಸಿಕ್ಕಿವೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದಾಗಿ ಹೇಳಿದ್ದಾರೆ. ಅವರು ಕೇಸು ಹಾಕಲಿ ಎಂದು ಸವಾಲು ಎಸೆದರು.
“ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ನಾವು ವಿಶ್ವಕಪ್ ಬಹಿಷ್ಕರಿಸಬೇಕಾಗುತ್ತದೆ”
ರಾಜ್ಯದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಗೆ ಸಿದ್ಧ ಎಂಬ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ರಾಜಕೀಯ ಪಕ್ಷವಾಗಿ ನಮ್ಮ ನಿರ್ಧಾರ ಏನೆಂದು ಆಮೇಲೆ ತಿಳಿಸುತ್ತೇವೆ ಎಂದರು.
Bengaluru, voter, list, Refinement, KPCC, President, DK Shivakumar,