ಬೆಂಗಳೂರು,ಜು.12- ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಎರಡು ದಿನಗಳ ಚಿಂತನಾ ಮಂಥನ ಸಭೆ ಹಮ್ಮಿಕೊಂಡಿದೆ. ಜು.14 ರಂದು ಬೆಂಗಳೂರಿನ ಹೊರಲಯದಲ್ಲಿರುವ ನಂದಿಬೆಟ್ಟ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮತ್ತಷ್ಟು ಪ್ರಬಲಗೊಳಿಸುವ ಹಿನ್ನೆಲೆಯಲ್ಲಿ ಬಿಜೆಪಿ ಮುಂದಾಗಿದೆ.
ಮಿಷನ್ ದಕ್ಷಿಣ್ ಅಂಗವಾಗಿ ಕಳೆದ ವಾರ ಹೈದರಾಬಾದ್ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಹಲವಾರು ಕೇಂದ್ರ ಸಚಿವರು, ಕರ್ನಾಟಕ ಕೋರ್ ಕಮಿಟಿಯ ಸದಸ್ಯರು, ಸಚಿವರು ಮತ್ತು ಇತರರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಆಂತರಿಕ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸದ್ಯದ ವಾತಾವರಣ ಪಕ್ಷಕ್ಕೆ ಪೂರಕವಾಗಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕಳೆದ ಕೆಲವು ತಿಂಗಳುಗಳಲ್ಲಿ ಹಿಜಾಬ್ ಮತ್ತು ಪಠ್ಯಪುಸ್ತಕ ವಿವಾದಗಳು ಮತ್ತು ಪಿಎಸ್ಐ ನೇಮಕಾತಿ ಹಗರಣದಂತಹ ಅನೇಕ ಸಮಸ್ಯೆಗಳು ಸರ್ಕಾರದ ಇಮೇಜ್ ಅನ್ನು ಕೆಡಿಸಿವೆ. ಮತ್ತೊಂದೆಡೆ, ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರವನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.