ಬೆಂಗಳೂರು,ಮಾ.15- ಕೇವಲ ಸಚಿವರಾಗುವ ಉದ್ದೇಶದಿಂದ ಮಾತ್ರ ನೀವು ಬಿಜೆಪಿ ಪಕ್ಷಕ್ಕೆ ಸೇರಿದ್ದಿರಾ ಎಂಬುದು ಇದೀಗ ಬಹಿರಂಗವಾಗಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಮಾಜಿ ಶಾಸಕ ಪುಟ್ಟಣ್ಣ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ತೊರೆದು ಬಿಜೆಪಿ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ಇತ್ತಿಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ಮುಂದಾಗಿರುವ ಸಂದರ್ಭದಲ್ಲೇ ರಮೇಶ್ ಅವರು ಪುಟ್ಟಣ್ಣ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಅವರು, 2020ರಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆದಂತಹ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಭಾರತೀಯ ಜನತಾ ಪಾರ್ಟಿಯ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ತಮ್ಮ ಪರವಾಗಿ ಹಗಲಿರುಳೆನ್ನದೆ ಹತ್ತಾರು ದಿನಗಳ ಕಾಲ ಮಾಡಿದ ನಿಸ್ವಾರ್ಥ ಕಾರ್ಯಗಳಿಂದ ತಾವು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುತ್ತೀರಿ.
ವಿಶೇಷವಾಗಿ ಈ ಭಾಗದ ಶಿಕ್ಷಕರು ಭಾರತೀಯ ಜನತಾ ಪಾರ್ಟಿಯ ಮೇಲಿನ ಒಲವಿನಿಂದ ಹಾಗೂ ತಮ್ಮ ಮೇಲಿನ ನಂಬಿಕೆಯಿಂದ ತಮ್ಮ ಪರವಾಗಿ ಮತ ಚಲಾವಣೆ ಮಾಡಿ, ತಮ್ಮನ್ನು ದೊಡ್ಡ ಅಂತರದಿಂದ ಜಯಗಳಿಸುವಂತೆ ಮಾಡಲು ಸಫಲರಾಗಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಯಾವ ಸಮಸ್ಯೆಗಳ ಬಗ್ಗೆಯೂ ಚಕಾರವೆತ್ತದ ತಾವು ಕೇವಲ ಭಾರತೀಯ ಜನತಾ ಪಾರ್ಟಿಯ ಸರ್ಕಾರದಲ್ಲಿ ಸಚಿವರಾಗಬೇಕೆಂಬ ಏಕೈಕ ದುರುದ್ದೇಶದಿಂದಲೇ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದ ವಿಷಯ ಈಗ ತಮ್ಮ ನಡೆಯಿಂದ ಬಹಿರಂಗವಾಗಿದೆ.
ನರೇಗಾ ಯೋಜನೆ ಸ್ಥಗಿತಗೊಳಿಸುವ ಹುನ್ನಾರ : ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ
ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಗಳಲ್ಲಿ ತಮ್ಮನ್ನು ನಿಷ್ಠೆಯಿಂದ ತೊಡಗಿಸಿಕೊಳ್ಳಬೇಕಿದ್ದ ತಾವು, ತಮ್ಮ ಕರ್ತವ್ಯವನ್ನು ಮರೆತು ಕೇವಲ ಅಧಿಕಾರದ ವ್ಯಾಮೋಹದಿಂದ ಭಾರತೀಯ ಜನತಾ ಪಾರ್ಟಿಯನ್ನು ತ್ಯಜಿಸಿ, ಕಳೆದ 75 ವರ್ಷಗಳ ಸ್ವಾತಂತ್ರ್ಯ ನಂತರದ ಅವಧಿಯಲ್ಲಿ 55 ವರ್ಷಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿ ದೇಶವನ್ನು ಮತ್ತು ವಿಶೇಷವಾಗಿ ಕರ್ನಾಟಕ ರಾಜ್ಯವನ್ನು ಲೂಟಿ ಹೊಡೆದಿರುವ ಮತ್ತು ಸುಮಾರು 150 ಕ್ಕೂ ಹೆಚ್ಚು ಬೃಹತ್ ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ನಿಮ್ಮ ಮಾನಸಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
ತಮ್ಮ ಅವಧಿ ಇನ್ನೂ ಮೂರೂವರೆ ವರ್ಷಗಳಿಗೂ ಹೆಚ್ಚು ಕಾಲ ಇದ್ದರೂ ಸಹ, ತಮ್ಮ ಮೇಲೆ ಅಪಾರ ವಿಶ್ವಾಸವನ್ನಿರಿಸಿ ತಮ್ಮ ಪರ ಮತ ಚಲಾವಣೆ ಮಾಡಿದ್ದ ಎಲ್ಲಾ ಶಿಕ್ಷಕರ ನಂಬಿಕೆಗಳನ್ನು ಹುಸಿಗೊಳಿಸಿರುತ್ತೀರಿ ಎಂಬ ಕಹಿ ಸತ್ಯದ ಮಾತನ್ನು ತಮಗೆ ಹೇಳಲಿಚ್ಛಿಸುತ್ತಾ, ತಮ್ಮ ಈ ಅತಿಯಾದ ಅಧಿಕಾರದ ವ್ಯಾಮೋಹ ಮತ್ತು ಮಂತ್ರಿಯಾಗಲೇಬೇಕೆಂಬ ಏಕೈಕ ಗುರಿಯನ್ನು ಹೊಂದಿರುವ ಸ್ವಾರ್ಥ ರಾಜಕಾರಣಿಯಾದ ತಾವು ಬೆಂಗಳೂರಿನ ಯಾವುದೇ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ರ್ಪಧಿಸಿದರೂ ಸಹ ಆ ಕ್ಷೇತ್ರಗಳಲ್ಲಿನ ಮತದಾರರು ಮತ್ತು ಶಿಕ್ಷಕರು ತಮಗೆ ಸರಿಯಾದ ರಾಜಕೀಯ ಪಾಠವನ್ನು ಕಲಿಸುತ್ತಾರೆ ಎಂಬ ಸತ್ಯವನ್ನು ತಮಗೆ ತಿಳಿಸಲಿಚ್ಛಿಸುತ್ತೇನೆ.
ಸತತ 3ನೇ ದಿನವೂ ನಡೆಯದ ಸಂಸತ್ ಕಲಾಪ, ಅಮೂಲ್ಯ ಸಮಯ ವ್ಯರ್ಥ
ಹಾಗೆಯೇ, ಭಾರತೀಯ ಜನತಾ ಪಾರ್ಟಿಯಲ್ಲಿ ತಮಗೆ ಎಲ್ಲ ಗೌರವಗಳನ್ನು ನೀಡಿದ್ದರೂ ಸಹ ಸಚಿವ ಸ್ಥಾನ ನೀಡಲಿಲ್ಲವೆಂಬ ಏಕೈಕ ದುರುದ್ದೇಶದಿಂದ ತಾವು ಪಕ್ಷವನ್ನು ತ್ಯಜಿಸಿರುವ ಸತ್ಯದ ಬಗ್ಗೆ ಹಾಗೂ ಭಾರತೀಯ ಜನತಾ ಪಾರ್ಟಿಯಲ್ಲಿ ತಮಗೆ ಆದ ಅನ್ಯಾಯವಾದರೂ ಏನು ? ಎಂಬ ವಿಷಯಗಳ ಬಗ್ಗೆ ಮಾಧ್ಯಮಗಳ ಸಮ್ಮುಖದಲ್ಲಿ ಬಹಿರಂಗ ಚರ್ಚೆಗೆ ತಮ್ಮನ್ನು ಆಹ್ವಾನಿಸುತ್ತಿದ್ದೇನೆ ಎಂದು ರಮೇಶ್ ಸವಾಲು ಹಾಕಿದ್ದಾರೆ.
BJP, NR Ramesh, letter, MLC, Puttanna, joins, Congress,