ಲಕ್ನೋ, ಜ.24- ತಾವು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ ಯೋಜನೆಗಳ ಲಾಭವನ್ನು ಪಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಅಯವರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಳಪೆ ಕಾನೂನು-ಸುವ್ಯವಸ್ಥೆ, ನಿರುದ್ಯೋಗ ಮತ್ತು ವಲಸೆ ದೊಡ್ಡ ಸಮಸ್ಯೆಗಳಾಗಿವೆ. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಉತ್ತರ ಪ್ರದೇಶ ಬಹಳಷ್ಟು ಹಿಂದುಳಿದಿದೆ ಎಂದು ಟೀಕಿಸಿದ್ದಾರೆ.
ಭಯ, ಭ್ರಷ್ಟಾಚಾರ, ತಾರತಮ್ಯ, ಆಸ್ತಿಯ ಅಭದ್ರತೆಯ ಜೊತೆಗೆ ನಿರುದ್ಯೋಗ ರಾಜ್ಯವನ್ನು ಕಾಡುತ್ತಿವೆ. ಇವು ದಿನೇ ದಿನೇ ಹೆಚ್ಚಾಗುತ್ತಿದ್ದು, ಜನರಲ್ಲಿ ಹತಾಶೆ ಸೃಷ್ಟಿಸುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
ತಾವು ಆರಂಭಿಸಿದ ಕೆಲಸಗಳ ರಾಜಕೀಯ ಲಾಭ ಪಡೆಯಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಯೋಗಿ ಆದಿತ್ಯ ನಾಥ್ಅಿವರ ಸರ್ಕಾರದ ಕೊಡುಗೆ ಏನು ಇಲ್ಲ. ಬಿಎಸ್ಪಿ ಸರ್ಕಾರದ ಅವಧಿಯಲ್ಲಿ ಸುಮಾರು ಎರಡೂವರೆ ಲಕ್ಷ ಬಡ ಕುಟುಂಬಗಳಿಗೆ ಮೂಲ ಸೌಕರ್ಯಗಳೊಂದಿಗೆ ಮನೆಗಳನ್ನು ಒದಗಿಸಲಾಗಿತ್ತು.
ಸುಮಾರು 15-20 ಲಕ್ಷ ಮನೆಗಳಿಗೆ ಸಿದ್ಧತೆಗಳು ನಡೆದಿದ್ದವು. ಆದರೆ ಸರ್ಕಾರ ಬದಲಾದ ಕಾರಣ ಈ ಕೆಲಸ ಅಪೂರ್ಣವಾಗಿತ್ತು, ಇದನ್ನು ಬಿಜೆಪಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಅವರು ಸ್ವಂತವಾಗಿ ಏನು ಮಾಡಿಲ್ಲ ಎಂದು ಮಾಯಾವತಿ ಆರೋಪಿಸಿದ್ದಾರೆ.
