ಬೆಂಗಳೂರು,ಜು.26- ಡಿಕೆಶಿ ವಿರುದ್ಧ ಮಾತನಾಡಿದ್ದಕ್ಕಾಗಿ ಸಿದ್ದರಾಮಯ್ಯ ಬಣದ ವ್ಯಕ್ತಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ನೀಡುವ ನೋಟಿಸ್ ಈಗ ನಗೆಪಾಟಲಿಯ ಸರಕಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ನೋಟಿಸ್ ನೀಡಿದ ಮರುದಿನವೇ ಮತ್ತೆ ಟೀಕೆ ಶುರುವಾಗುತ್ತದೆ. ಡಿಕೆಶಿ ಅವರ ಅಸಹಾಯಕ ಸ್ಥಿತಿಗೆ ಮರುಕಪಡುವಂತಾಗಿದೆ ಎಂದು ಟೀಕಿಸಿದೆ. ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದ ಎಚ್ಚರಿಕೆ ಡಿಕೆಶಿಯ ಅಸಹಾಯಕತೆಗೆ ಹಿಡಿದ ಕನ್ನಡಿ.
ತನ್ನ ಮಾತು ಕೇಳುವುದಿಲ್ಲ ಎಂದು ಸಾಮಾನ್ಯ ಶಾಸಕನ ಬಾಯಿ ಮುಚ್ಚಿಸಲು ಹೈಕಮಾಂಡ್ ಮೊರೆ ಹೋಗುವಂತಾಯ್ತು. ಇದು ಅಸಹಾಯಕತೆ ಅಲ್ಲದೆ ಮತ್ತೇನು? ಎಂದು ಛೇಡಿಸಿದೆ. ಡಿಕೆಶಿ ವಿರುದ್ಧದ ಪಿಸುಮಾತು ಪ್ರಕರಣಕ್ಕಾಗಿ ಉಗ್ರಪ್ಪ ಅವರಿಗೆ ಈ ಹಿಂದೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದೇ ಉಗ್ರಪ್ಪ ಸಿದ್ದರಾಮಯ್ಯ ಜೊತೆ ವೇದಿಕೆಯಲ್ಲಿ ವಿರಾಜಮಾನರಾದರು, ಡಿಕೆಶಿ ಜತೆ ಪತ್ರಿಕಾ ಗೋಷ್ಠಿ ನಡೆಸಿದರು.
ತಾನು ಕೊಟ್ಟ ನೋಟಿಸ್ಗೆ ತಾನೇ ಬೆಲೆ ನೀಡಲಾಗದ ಸ್ಥಿತಿಗೆ ಡಿಕೆಶಿ ತಲುಪಿದ್ದಾರೆ ಎಂದು ಬಿಜೆಪಿ ಅಪಹಾಸ್ಯ ಮಾಡಿದೆ.