ಕಣ್ಣೂರು, ಜು.12- ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿನ ಆರ್ಎಸ್ಎಸ್ ಕಚೇರಿಯ ಮೇಲೆ ಬಾಂಬ್ ದಾಳಿ ನಡೆದಿದ್ದು, ಕಿಟಕಿ ಗಾಜುಗಳು ಹಾನಿಗೊಳಗಾಗಿವೆ.
ದೃಶ್ಯಾವಳಿಯಲ್ಲಿ ಕಂಡು ಬಂದಿರುವಂತೆ ಇಂದು ಮುಂಜಾನೆ ಕಚೇರಿಯ ಮೇಲೆ ಬಾಂಬ್ ದಾಳಿಯಾಗಿದೆ. ಸ್ಫೋಟದಿಂದ ಕಚೇರಿ ಕಿಟಕಿಯ ಗಾಜುಗಳು ಜಕ್ಕಂಗೊಂಡಿವೆ. ಉಳಿದಂತೆ ಹೆಚ್ಚಿನ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಸುತ್ತಮುತ್ತಲ ಪರಿಸರವನ್ನು ಅವಲೋಕನ ನಡೆಸಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಈ ರೀತಿಯ ಬಾಂಬ್ ದಾಳಿಗಳು ಸಾಮಾನ್ಯವಾಗಿವೆ. ಕೇರಳದ ತಿರುವನಂತಪುರಂನ ಸಿಪಿಐಎಂನ ಕೇಂದ್ರ ಕಚೇರಿಯೂ ದಾಳಿಗೆ ಒಳಗಾಗಿತ್ತು. ಹಲವಾರು ಕಾಂಗ್ರೆಸ್ ಕಚೇರಿಗಳ ಮೇಲೂ ದಾಳಿಯಾಗಿದೆ. ಐದು ದಿನಗಳ ಹಿಂದೆ ಚಿಂದಿ ಆಯುವ ತಂದೆ ಮಗ ಶಂಕಿತ ಬಾಂಬ್ ದಾಳಿಯಿಂದ ಮೃತಪಟ್ಟಿದ್ದರು.