ಬೆಂಗಳೂರು,ಮಾ.16- ವಸತಿ ಸಚಿವ ವಿ.ಸೋಮಣ್ಣ ಅವರನ್ನು ಎಂದೂ ಕಡೆಗಣಿಸಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಕೂತು ಪರಿಹರಿಸಿ ಕೊಳ್ಳಲಾಗುವುದು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ವರಿಷ್ಠರು ಸೋಮಣ್ಣನವರನ್ನು ಕರೆದು ಮಾತನಾಡಿದ್ದಾರೆ, ಎಲ್ಲವೂ ಸರಿಹೋಗುತ್ತದೆ,ಯಾವುದೇ ರೀತಿಯಲ್ಲಿ ಗೊಂದಲವಿಲ್ಲ. ಸೋಮಣ್ಣ ಅವರನ್ನು ನಾನು ಭೇಟಿ ಮಾಡದೆ ಮೂರು ತಿಂಗಳಾಯಿತು. ಯಾರು ಯಾರನ್ನೂ ಕಡೆಗಣನೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ, ವಿಜಯೇಂದ್ರ ಕೂಡ ಕೆಲಸ ಮಾಡುತ್ತಿದ್ದಾರೆ, ಸೋಮಣ್ಣ ಕೂಡ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು. ನಮ್ಮದು ಒನ್ ಪಾಯಂಟ್ ಪೊ್ರೀಗ್ರೇಮ್ ಬೇರೆ ವಿಚಾರಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದೊಳಗೆ ನಾಯಕರು ಭಿನ್ನಮತ, ಅಸಮಾಧಾನದ ಹೇಳಿಕೆಗಳನ್ನು ನೀಡಿದರೆ, ಅಸಮಾಧಾನದಿಂದ ವರ್ತಿಸಿದರೆ ಅದು ಪಕ್ಷಕ್ಕೆ ಒಳ್ಳೆಯದಲ್ಲ, ಅದನ್ನು ಶಮನಗೊಳಿಸುವ ಪ್ರಯತ್ನವನ್ನು ಹಿರಿಯ ನಾಯಕರು ಮಾಡುತ್ತಿರುತ್ತಾರೆ ಎಂದು ಬಿಎಸ್ವೈ ಹೇಳಿದರು.
#BJP. #Yadiyurappa, #VSomanna,