ನವದೆಹಲಿ, ಫೆ.11- ಕೋವಿಡ್ನಿಂದಾಗಿ ಜಾಗತಿಕ ಆರ್ಥಿಕ ಹಿಂಜರಿಕೆಯಾಗಿದ್ದು, ಸವಾಲಿನ ಸಂದರ್ಭವನ್ನು ಜನಸಾಮಾನ್ಯರಿಗೆ ಹೊರೆಯಾಗದಂತೆ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಮತ್ತು ಶಿಸ್ತುಬದ್ಧ ಆರ್ಥಿಕತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕುರಿತು ರಾಜ್ಯಸಭೆಯಲ್ಲಿಂದು ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, 2008-09ರಲ್ಲಿ ಆರ್ಥಿಕ ಹಿಂಜರಿಕೆಯಾಗಿತ್ತು. ದೇಶದಲ್ಲಿ 2.12 ಲಕ್ಷ ಕೋಟಿ ಮೌಲ್ಯದ ಜಿಡಿಪಿ ನಷ್ಟವಾಗಿತ್ತು. ಆದರೆ, ಹಣದುಬ್ಬರದ ಪ್ರಮಾಣ ಶೇ.9.1ರಷ್ಟು ಹೆಚ್ಚಳವಾಗಿ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದರು.
ಕೋವಿಡ್ನಿಂದಾಗಿ 2020ರಿಂದ ಈವರೆಗೂ ದೇಶದಲ್ಲಿ 9.57 ಲಕ್ಷ ಕೋಟಿ ನಷ್ಟವಾಗಿದೆ. ಇಷ್ಟೊ ದೊಡ್ಡ ಪ್ರಮಾಣದ ಹಾನಿಯಾಗಿದ್ದರೂ ಕೂಡ ಶೇ.6.2ರ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಬೃಹತ್ ಸವಾಲಿನ ನಡುವೆಯೂ ಜನ ಸಾಮಾನ್ಯರಿಗೆ ಹೊರೆಯಾಗದಂತೆ ನಾವು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ ಎಂದು ತಿರುಗೇಟು ನೀಡಿದರು.
ಕಂದಾಯ ವೆಚ್ಚಗಳಿಂದ ಮರುಪಡೆಯುವಿಕೆ ಪ್ರಮಾಣ ಕಡಿಮೆ ಇದೆ. ಬಂಡವಾಳ ವೆಚ್ಚದಲ್ಲಿ ಶಾಶ್ವತ ಆಸ್ತಿ ನಿರ್ಮಾಣವಾಗಲಿದ್ದು, ಮರುಪಡೆಯುವಿಕೆ ಪರಿಣಾಮಕಾರಿ. ಜನರ ಹಣವನ್ನು ನಾವು ಬಂಡವಾಳ ವೆಚ್ಚಕ್ಕೆ ಹೆಚ್ಚಾಗಿ ತೊಡಗಿಸುತ್ತಿದ್ದೇವೆ. ಕಂದಾಯ ವೆಚ್ಚ ನಿಯಂತ್ರಿಸುವುದು ಸವಾಲಿನ ಕೆಲಸವಾಗಿದ್ದರೂ ಕೂಡ ಹಿಂದೇಟು ಹಾಕಿಲ್ಲ ಎಂದು ಹೇಳಿದರು.
ಲಾಕ್ಡೌನ್ನಿಂದಾಗಿ ಶೇ.67ರಷ್ಟು ಸೂಕ್ಷ್ಮ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳು ಹಾಗೂ ಸಣ್ಣ ವ್ಯಾಪಾರಗಳು ಮುಚ್ಚಿವೆ. ಕೋವಿಡ್ ವೇಳೆಯಲ್ಲೂ ಕೇಂದ್ರ ಸರ್ಕಾರದ ಉಪ ಕ್ರಮಗಳಿಂದ ದೇಶದ ಔದ್ಯೋಗಿಕ ವಲಯ ಸುಧಾರಣೆ ಕಾಣುತ್ತಿದೆ.
