ಸಂಪುಟ ಸರ್ಜರಿ ಸುದ್ದಿ ಬಿಜೆಪಿಯಲ್ಲಿ ಗರಿಗೆದರಿದ ಚಟುವಟಿಕೆ

Social Share

ಬೆಂಗಳೂರು,ಜ.7- ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ ಎಂಬ ಊಹಾಪೋಹ ಕೇಳಿ ಬರುತ್ತಿರುವ ಬೆನ್ನಲ್ಲೇ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಲವು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, 2023ರ ಆರಂಭದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಕಾರಣ, ಕೆಲವು ಶಾಸಕರು ಸಚಿವ ಸ್ಥಾನ ಕೈ ತಪ್ಪಿ ಹೋಗಬಹುದೆಂಬ ಆತಂಕದಲ್ಲಿದ್ದಾರೆ.
ಅನೇಕ ಶಾಸಕರು ತಮ್ಮ ಪ್ರದೇಶ ಅಥವಾ ದುರ್ಬಲ ವರ್ಗಗಳಿಗೆ ಪ್ರಾತಿನಿಧ್ಯದ ಬೇಡಿಕೆಯೊಂದಿಗೆ ಪಕ್ಷದ ಹೈಕಮಾಂಡ್‍ನ ಬಾಗಿಲು ತಟ್ಟುತ್ತಿದ್ದಾರೆ.ಸಚಿವ ಸ್ಥಾನದಿಂದ ವಂಚಿತರಾಗಿರುವ ಬಿಜೆಪಿಯ ಕೆಲವು ಹಿರಿಯ ಶಾಸಕರು ಪ್ರಧಾನಿ ಮೋದಿ ಅವರ ಒಲವು ಗಳಿಸುವ ದೃಷ್ಟಿಯಿಂದ ರಸ್ತೆಗಿಳಿದಿದ್ದಾರೆ. ಮೋದಿ ಕಾ ಕಾಮ್ ಮೂಲಕ ಆ್ಯಕ್ಟೀವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿಯವರ ನೆಚ್ಚಿನ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಮುಂದಾಗಿದ್ದಾರೆ.
ಮುದ್ರಾ ಯೋಜನೆ, ಕೌಶಲ್ಯ ಅಭಿವೃದ್ಧಿ, ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಜನ್ ಧನ್ ಯೋಜನೆ, ಉಜ್ವಲ್ ಯೋಜನೆ, ಡಿಜಿಟಲ್ ಇಂಡಿಯಾ ಮತ್ತು ಇತರ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಒಂದು ವಾರದ ಮೋದಿ ಯುಗ್ ಉತ್ಸವ ಆಯೋಜಿಸುತ್ತಿದ್ದಾರೆ.
ಹೆಚ್ಚಿನ ಯುವಕರು ನೋಂದಾಯಿಸಿಕೊಳ್ಳಲು ಮತ್ತು ಉದ್ಯೋಗ ಮಾರುಕಟ್ಟೆಗೆ ಹೊಂದಿಕೊಳ್ಳಲು ಐದು ವರ್ಷಗಳ ತರಬೇತಿಯನ್ನು ಪಡೆಯಲು ಸಹಾಯ ಮಾಡುವ ಸಲುವಾಗಿ ಮೆಗಾ ಉದ್ಯೋಗ ಮೇಳ ಮತ್ತು ಕೌಶಲ್ಯ ಅಭಿವೃದ್ಧಿ ದಾಖಲಾತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸಚಿವರು ಸೇರಿದಂತೆ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಇದೇ ಮಾದರಿ ಅನುಸರಿಸಲು ಪ್ರಯತ್ನಿಸಿದ್ದಾರೆ.
ಬಿಜೆಪಿಗೆ ಪಕ್ಷಾಂತರಗೊಂಡ ಬಹುಜನ ಸಮಾಜ ಪಕ್ಷದ ಶಾಸಕ ಎನ್.ಮಹೇಶ್ ಅವರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅವೇಶನದಲ್ಲಿ ವಿವಾದಾತ್ಮಕ ಮತಾಂತರ ವಿರೋ ಮಸೂದೆಯನ್ನು ಮಂಡಿಸಿದಾಗ ಸರ್ಕಾರವನ್ನು ಸಮರ್ಥಿಸಿಕೊಂಡು ಗಮನ ಸೆಳೆದರು.
ಎಸ್‍ಸಿ(ಬಲ) ಎರಡು ಸಂಸದರು ಮತ್ತು ಶಾಸಕರನ್ನು ಹೊಂದಿದ್ದರೂ, ಪ್ರಾತಿನಿಧ್ಯದ ಕೊರತೆಯಿಂದ ಪ್ರತಿಪಕ್ಷಗಳಿಂದ ಟೀಕೆಗೆ ಒಳಗಾಗಿದೆ. ದಲಿತರ ಮತಗಳನ್ನು ಗೆಲ್ಲಲು ಮತ್ತು ಹಳೇ ಮೈಸೂರಿನಲ್ಲಿ ಕಾಂಗ್ರೆಸ್‍ನ ಪ್ರಭಾವವನ್ನು ಕುಗ್ಗಿಸಲು ಉತ್ಸುಕವಾಗಿರುವ ಬಿಜೆಪಿ, ಸಂಪುಟ ಪುನಾರಚನೆಯಲ್ಲಿ ಅವರಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ 50 ಮತಗಳಿಗೆ ಸೀಮಿತಗೊಂಡಿದ್ದು, ಠೇವಣಿ ಕೈತಪ್ಪಿದ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನಕ್ಕಾಗಿ ಹೈಕಮಾಂಡ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು ಇದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಪಕ್ಷವನ್ನು ತಮ್ಮೊಂದಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರೂ ಬಿಜೆಪಿ ಅಭ್ಯರ್ಥಿ ಆರ್.ರಘು ಸೋತಿರುವುದು ಟೀಕೆಗೆ ಗುರಿಯಾಗಿದೆ. ಅತಿಯಾದ ಆತ್ಮವಿಶ್ವಾಸದಿಂದ ಪಕ್ಷಕ್ಕೆ ನಷ್ಟ ಉಂಟಾಗಿದೆ ಇದೊಂದು ಎಚ್ಚರಿಕೆ ಗಂಟೆ ಎಂದು ಹೇಳಲಾಗಿದೆ.

Articles You Might Like

Share This Article